ಬೆಂಗಳೂರು: ಪರಿಸರ ಸಮತೋಲನ, ಜೀವ ಸಂಕುಲದ ಭವಿಷ್ಯಕ್ಕಾಗಿ ವನ್ಯಜೀವಿಗಳನ್ನು ರಕ್ಷಣೆ ಮಾಡುವ ಅಗತ್ಯವನ್ನು ಅರಣ್ಯ ಮತ್ತು ಪರಿಸರ ಖಾತೆ ಸಚಿವ ರಮನಾಥ ರೈ ಪ್ರತಿಪಾದಿಸಿದ್ದಾರೆ.
ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿಂದು 63ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಲಾಲ್ಬಾಗ್ವರೆಗೆ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವನ್ಯಜೀವಿಗಳನ್ನು ಮೋಜಿಗಾಗಿ, ಆಹಾರಕ್ಕಾಗಿ, ಅವುಗಳ ದೇಹದ ಭಾಗಗಳನ್ನು ಮಾರಾಟ ಮಾಡಿ ಹಣ ಸಂಪಾದಿಸಲು ಹತ್ಯೆ ಮಾಡಲಾಗುತ್ತಿದೆ. ಇದರಿಂದ ಪ್ರಾಕೃತಿಕ ಅಮಸತೋಲನವುಂಟಾಗಿ ಹವಮಾನ ಬದಲಾವಣೆ ಮತ್ತು ವನ್ಯ ಜೀವಿಗಳ ನಾಶಕ್ಕೂ ಇದು ಕಾರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ವನ್ಯಜೀವಿಗಳ ರಕ್ಷಣೆ, ಕಾಳಜಿ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವನ್ಯಜೀವಿ ಸಪ್ತಾಹವನ್ನು ಆಯೋಜಿಸಲಾಗುತ್ತಿದ್ದು, ಅಹಿಂಸೆಯನ್ನು ಬೋಧಿಸಿದ ಗಾಂಧೀಜಿಯವರ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.