ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಸ್ತೆ ಅಪಘಾತದಲ್ಲಿ ವೃದ್ಧ ದಂಪತಿ ಸಾವು

ಮೈಸೂರು ರಸ್ತೆ ಫ್ಲೈಓವರ್ ಮೇಲಿನ ರಸ್ತೆ ಗುಂಡಿ ಇನ್ನೆರಡು ಜೀವಗಳು ಬಲಿಯಾಗಿದೆ.
Published on
ಬೆಂಗಳೂರು: ಮೈಸೂರು ರಸ್ತೆ ಫ್ಲೈಓವರ್ ಮೇಲಿನ ರಸ್ತೆ ಗುಂಡಿ ಇನ್ನೆರಡು ಜೀವಗಳು ಬಲಿಯಾಗಿದೆ. 
ಅನಾರೋಗ್ಯದ ನಿಮಿತ್ತ ಮೊಮ್ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬೈಕ್‍ನಲ್ಲಿ ಹಿಂದಿರುಗುತ್ತಿದ್ದ ದಂಪತಿ ರಸ್ತೆಯಲ್ಲಿದ್ದ ಗುಂಡಿಯನ್ನು ತಪ್ಪಿಸಲು ಬ್ರೇಕ್ ಹಾಕಿದ್ದಾರೆ. ಆಗ ಹಿಂದಿನಿಂದ ಅತಿವೇಗವಾಗಿ ಬಂದ ತಮಿಳುನಾಡಿನ ಬಸ್ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಜ್ಜಿ-ತಾತ ಸ್ಥಳದಲ್ಲೇ ಮೃತಪಟ್ಟಿದ್ದು, ಮೊಮ್ಮಗು ಮಾತ್ರ ಅಚ್ಚರಿ ಎಂಬಂತೆ ಅಪಾಯದಿಂದ ಪಾರಗಿದೆ.
ಚಿಕ್ಕಪೇಟೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ದಂಪತಿಗಳನ್ನು ಮೈಸೂರು ರಸ್ತೆ ಗೋರಿಪಾಳ್ಯ ನಿವಾಸಿಗಳಾದ ಅಂಥೋಣಿ ಜೋಸೆಫ್ (55), ಮತ್ತು ಸಗಾಯ ಮೇರಿ(53) ಎಂದು ಗುರುತಿಸಲಾಗಿದೆ.
ದಂಪತಿಯ ಆರು ವರ್ಷದ ಮೊಮ್ಮಗನಿಗೆ ಅನಾರೋಗ್ಯವಿದ್ದ ಕಾರಣ ಬೈಕ್‍ನಲ್ಲಿ ಮಾರ್ಥಾಸ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಬೆಳಗಿನ ಜಾವ 3.30ಕ್ಕೆ ಜೆ.ಜೆ.ನಗರದ ತಮ್ಮ ನಿವಾಸಕ್ಕೆ ಹಿಂದಿರುಗುತ್ತಿದ್ದಾಗ ಈ ಘಟನೆ ನದೆದಿದೆ. ಘಟನೆಯಲ್ಲಿ ಮಗುವಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕ್ಕಪೇಟೆ ಸಂಚಾರಿ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತ ನಡೆಸಿದ ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದಾನೆ. ಸಂಚಾರಿ ಠಾಣೆ ಪೊಲೀಸರು ಬಸ್ ನ್ನು ವಶಕ್ಕೆ ಪಡೆದಿದ್ದಾರೆ. ಮೃತರ ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.ಪೋಲೀಸರು  ಪ್ರಕರಣ ದಾಖಲಿಸಿಕೊಂಡು ಬಸ್ ಚಾಲಕನಿಗಾಗಿ ಶೋಧ ನಡೆಸಿದ್ದಾರೆ.
ಇದೀಗ ಸ್ಥಳಕ್ಕೆ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಭೇಟಿ ನೀಡಿದ್ದು ತಕ್ಷಣವೇ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com