ಕೊಡಗು: ಕನ್ನಡ ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಮಂಗಳವಾರ ಮಧ್ಯಾಹ್ನ 12.33ಕ್ಕೆ ಧನುರ್ ಲಗ್ನದಲ್ಲಿ ತೀರ್ಥೋದ್ಭವವಾಗಿದ್ದು, ಸಾವಿರಾರು ಮಂದಿ ಸಾಕ್ಷಿಯಾದರು.
ಅಪೂರ್ವ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದ ಸಾವಿರಾರು ಭಕ್ತರು ಪುಣ್ಯ ಸ್ನಾನ ಮಾಡಿ, ತೀರ್ಥರೂಪಿ ಕಾವೇರಿ ಮಾತೆಯ ದರ್ಶನ ಪಡೆದು ತೀರ್ಥ ಸೇವಿಸಿ ಪುನೀತರಾದರು.
ತೀರ್ಥ ಉದ್ಭವವಾಗುವ ಮುನ್ನ ಬ್ರಹ್ಮಕುಂಡಿಕೆಗೆ ಅರ್ಚಕರು ವಿಧಿ ವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಿದರು. ಕೊಡಗಿನಾದ್ಯಂತ ಹಬ್ಬವನ್ನು ವಿಶೇಷ ಶೃದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ.
ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಊಟೋಪಚಾರ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದ್ದು, ಮಡಿಕೇರಿ ಭಾಗಮಂಡಲ ತಲಕಾವೇರಿಗೆ ಹೋಗಿ ಬರಲು ಅಗತ್ಯ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಜನರು ಆಗಮಿಸಿ ಸರದಿಯಲ್ಲಿ ಕಾಯುತ್ತಿದ್ದರು.
ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಂದ ಹೆಚ್ಚು ಭಕ್ತರು ಭಾಗವಹಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.