ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್,ಜಿ ಸಿದ್ದರಾಮಯ್ಯ ಅವರ ನೇತೃತ್ವದ ನಿಯೋಗ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಲಿದ್ದಾರೆ.
ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕ್ ಸೇವೆಗಳನ್ನು ನಡೆಸುವಂತೆ ಸಚಿವ ಅರುಣ್ ಜೇಟ್ಲಿ ಅವರಿಗೆ ಮನವಿ ಸಲ್ಲಿಸಲಿದ್ದಾರೆ. ಸದ್ಯ ಬ್ಯಾಂಕ್ ಸೇವೆಗಳು ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ನಡೆಯುತ್ತಿವೆ. ಸಾಮಾನ್ಯ ಜನರ ಜೊತೆ ವ್ಯವಹರಿಸುವಾಗ ಸರಳ ಭಾಷೆಯಲ್ಲಿ ವ್ಯವಹರಿಸಬೇಕು.
ಇದರಿಂದಾಗಿ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸುವಂತೆ ಆದೇಶ ಹೊರಡಿಸಬೇಕು ಹಾಗೂ ಬ್ಯಾಂಕಿಂಗ್ ನೇಮಕಾತಿ ವೇಳೆ, ಪರೀಕ್ಷೆಯನ್ನು ಆಯಾಯಾ ಭಾಷೆಯಲ್ಲಿಡಬೇಕು ಎಂದು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.
ಅಖಿಲ ಭಾರತ ವ್ಯವಹಾರಗಳ ನೇಮಕಾತಿ ಪರೀಕ್ಷೆ ಅಕ್ಟೋಬರ್ 7 ರಂದು ನಡೆಯಲಿದ್ದು, ಸ್ಥಳೀಯ ಭಾಷೆಯಲ್ಲೇ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಇರಬೇಕೆಂದು ಒತ್ತಾಯಿಸಿದ್ದಾರೆ. ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಲು ದೆಹಲಿಗೆ ತೆರಳುವ ಮನ್ನಈ ವಿಷಯ ತಿಳಿಸಿದ್ದಾರೆ.
ಜೊತೆಗೆ ಕೇಂದ್ರ ಅಬಕಾರಿ ಇಲಾಖೆ, ರೈಲ್ವೆ ಇಲಾಖೆ ಮತ್ತು ಇತರೆ ಕೇಂದ್ರ ಸರ್ಕಾರಿ ಉದ್ಯೋಗಗಳ ನೇಮಕಾತಿ ಪರೀಕ್ಷೆಯನ್ನು ಆಯಾಯಾ ಪ್ರಾದೇಶಿಕ ಭಾಷೆಗಳಲ್ಲೆ ನಡೆಸುವಂತೆ ಒತ್ತಾಯಿಸುವುದಾಗಿ ತಿಳಿಸಿದ್ದಾರೆ.