ರಾಜ್ಯ
ಗೌರಿ ಲಂಕೇಶ್ ಹತ್ಯೆಗೆ ದೇಶಿ ನಿರ್ಮಿತ ಪಿಸ್ತೂಲ್ ಬಳಕೆ: ತನಿಖಾಧಿಕಾರಿಗಳು
ನರೇಂದ್ರ ದಾಬೋಲ್ಕರ್ ಮತ್ತು ಎಡ ಪಂಥೀಯ ರಾಜಕಾರಣಿ ಗೋವಿಂದ ಪನ್ಸಾರೆ ಹಾಗೂ ಎಂ,ಎಂ ಕಲ್ಬುರ್ಗಿ ಅವರ ಹತ್ಯೆಗೆ ಬಳಸಿದ ದೇಶಿ ನಿರ್ಮಿತ ಪಿಸ್ತೂಲ್ ...
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಮೂರು ದಿನಗಳೇ ಕಳೆದಿವೆ,ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸಾಕ್ಷ್ಯಾಧಾರ ಕಲೆ ಹಾಕಲು ಪ್ರಯತ್ನ ಪಡುತ್ತಿದ್ದಾರೆ. ಗೌರಿ ಲಂಕೇಶ್ ಹತ್ಯೆಗೆ ಬಳಸಿದ ಆಯುಧಗಳ ಮಾದರಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಎಫ್ ಎಸ್ ಎಲ್ ಅಧಿಕಾರಿ, ಹತ್ಯೆಗೆ ದೇಶಿಯ ನಿರ್ಮಿತ 7.65 ಎಂಎಂ ಪಿಸ್ತೂಲ್ ಬಳಸಲಾಗಿದೆ. ಘಟನೆ ಸ್ಥಳದಲ್ಲಿ ದೊರಕಿದ ಖಾಲಿ ಕಾರ್ಟ್ರಿಜ್ ಗಳನ್ನು ಪರಿಶೀಲಿಸಿದಾಗ ಈ ಮಾಹಿತಿ ದೊರಕಿದೆ ಎಂದು ಹೇಳಿದ್ದಾರೆ.
10 ಅಡಿ ದೂರದಲ್ಲಿ ಆರೋಪಿ ಶೂಟ್ ಮಾಡಿದ್ದಾನೆ. ನಾಲ್ಕು ಬುಲೆಟ್ ಹಾರಿಸಿದ್ದು, ಒಂದು ಮಾತ್ರ ಮಿಸ್ ಫೈರ್ ಆಗಿ ಉಳಿದ 3 ಗುಂಡುಗಳು ಗೌರಿ ಅವರ ದೇಹ ಹೊಕ್ಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೌರಿ ಲಂಕೇಶ್ ಹತ್ಯೆಗೆ ವಿದೇಶಿ ನಿರ್ಮಿತ ಗನ್ ಬಳಸಲಾಗಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು, ಆದರೆ ನಂತರ ನಡೆಸಿದ ಪರೀಕ್ಷೆಯಲ್ಲಿ, ವಿಚಾರವಾದಿ ನರೇಂದ್ರ ದಾಬೋಲ್ಕರ್ ಮತ್ತು ಎಡ ಪಂಥೀಯ ರಾಜಕಾರಣಿ ಗೋವಿಂದ ಪನ್ಸಾರೆ ಹಾಗೂ ಎಂ,ಎಂ ಕಲ್ಬುರ್ಗಿ ಅವರ ಹತ್ಯೆಗೆ ಬಳಸಿದ ದೇಶಿ ನಿರ್ಮಿತ ಪಿಸ್ತೂಲ್ ರೀತಿಯಲ್ಲೇ ಗೌರಿ ಅವರ ಹತ್ಯೆಗೂ ಬಳಸಲಾಗಿದೆ ಎಂದು ವಿವರಿಸಿದ್ದಾರೆ.
ಕಲ್ಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು, ಗೌರಿ ಅವರ ನಿವಾಸದಲ್ಲಿ ದೊರೆತ ಸಿಸಿಟಿವಿ ದೃಶ್ಯಾವಳಿಯನ್ನು ಅವರಿಗೆ ರವಾನಿಸಲಾಗಿದೆ. ಹತ್ಯೆ ಮಾಡುವಾಗ ಆರೋಪಿ ಜೊತೆ ಎಷ್ಟು ಮಂದಿ ಬಂದಿದ್ದರು ಎಂಬ ಬಗ್ಗೆ ಮಾಹಿತಿಯಿಲ್ಲ.
ತನಿಖಾ ತಂಡ ಮೂರು ವಿಭಾಗಗಳಾಗಿ ವಿಂಗಡನೆಯಾಗಿದ್ದು, ಪ್ರತಿಯೊಂದು ತಂಡವೂ ಪ್ರತ್ಯೇಕ ದೃಷ್ಟಿ ಕೋನಗಳಿಂದ ತನಿಖೆ ನಡೆಸುತ್ತಿದೆ.ರಾಜ್ಯದಲ್ಲಿ ಸಕ್ರಿಯರಾಗಿರುವ ಸುಫಾರಿ ಕಿಲ್ಲರ್ ಗಳನ್ನು ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.