ಬೆಂಗಳೂರು ರೌಂಡ್ಸ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೆಟ್ಟ ಬಿಎಂಟಿಸಿ ಬಸ್ಸುಗಳ ದರ್ಶನ ಭಾಗ್ಯ!

ನಗರದಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಭೇಟಿ ನೀಡಿದ...
ಪೈ ಲೇ ಔಟ್ ನಲ್ಲಿ ಚರಂಡಿಯನ್ನು ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಪೈ ಲೇ ಔಟ್ ನಲ್ಲಿ ಚರಂಡಿಯನ್ನು ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Updated on
ಬೆಂಗಳೂರು: ನಗರದಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಎಂಟಿಸಿ ಬಸ್ಸುಗಳ ಕಳಪೆ ನಿರ್ವಹಣೆ ಮತ್ತು ನಗರದ ಟ್ರಾಫಿಕ್ ಜಾಮ್ ನ ನಿಜ ದರ್ಶನ ಅವರಿಗಾಯಿತು. ಅನಿವಾರ್ಯವಾಗಿ ಅವರು ನಗರ ದರ್ಶನವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ವಾಪಾಸಾಗಬೇಕಾಯಿತು.
ಬೆಂಗಳೂರು ಸಿಟಿ ಪ್ರವಾಸಕ್ಕೆಂದು ಇರುವ ಬಸ್ಸಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟದ ಕೆಲವು ಸಹೋದ್ಯೋಗಿಗಳು, ಪಕ್ಷದ ಕಾರ್ಯಕರ್ತರು, ಅಧಿಕಾರಿಗಳೊಂದಿಗೆ ನಗರ ಭೇಟಿಗೆಂದು ಹೊರಟಿದ್ದರು. ಸಿಎಂ ಜೊತೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ನಗರಾಭಿವೃದ್ಧಿ ಸಚಿವ ಆರ್.ರೋಶನ್ ಬೇಗ್, ಗೃಹ ಸಚಿವ ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ, ಮೇಯರ್ ಜಿ. ಪದ್ಮಾವತಿ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಮತ್ತು ಬಿಡಬ್ಲ್ಯುಎಸ್ಎಸ್ ಬಿ ಅಧ್ಯಕ್ಷ ತುಶಾರ್ ಗಿರಿನಾಥ್ ಇದ್ದರು.
ಗೃಹ ಕಚೇರಿ ಕೃಷ್ಣಾದಿಂದ ಮುಖ್ಯಮಂತ್ರಿಗಳು ಕುಳಿತ ಬಸ್ಸು ಹೊರಟ ತಕ್ಷಣ ಬಸ್ಸಿನ ಹವಾನಿಯಂತ್ರಿತದಲ್ಲಿ ಏನೋ ತೊಂದರೆಯಿದೆ ಎಂದು ಅಧಿಕಾರಿಗಳಿಗೆ ಮನವರಿಕೆಯಾಯಿತು. ಆದರೆ ಆ ಹೊತ್ತಿನಲ್ಲಿ ಏನು ಮಾಡಲು ಸಾಧ್ಯವಿರಲಿಲ್ಲ. ಹವಾನಿಯಂತ್ರಿತ ಸೌಲಭ್ಯ ಕೆಲಸ ಮಾಡದೆ ಬಸ್ಸಿನ ಒಳಗೆ ಬಿಸಿಗೆ ಮುಖ್ಯಮಂತ್ರಿ, ಸಚಿವರು ಮತ್ತು ಅಧಿಕಾರಿಗಳು ಬೆವತು ಹೋದರು.
ಬಸ್ಸು ಜೆ.ಸಿ.ರಸ್ತೆಗೆ ಬರುವ ಹೊತ್ತಿಗೆ ಕೆಲವು ಅಧಿಕಾರಿಗಳು ಇನ್ನೊಂದು ಬಸ್ಸಿಗೆ ಹತ್ತಿದರು. ಆ ಬಸ್ಸು ಅಧಿಕಾರಿಗಳು ಮತ್ತು ಪತ್ರಕರ್ತರಿಗಾಗಿ ಇತ್ತು. ಆದರೆ ಈ ಬಸ್ಸಿನಲ್ಲಿ ಕುಳಿತಿದ್ದ ಮುಖ್ಯಮಂತ್ರಿ ಹಾಗೂ ಇತರ ಸಚಿವರು ಶಾಂತಿನಗರ ಬಸ್ ಡಿಪೊಗೆ ಬರುವವರೆಗೆ ಸೆಖೆಯನ್ನು ಅನುಭವಿಸಬೇಕಾಯಿತು. ಅಲ್ಲಿಂದ ನಂತರ ಇನ್ನೊಂದು ಬಸ್ಸಿನಲ್ಲಿ ತೆರಳಿದರು. ಆ ಬಸ್ಸು ಕೂಡ ಅಲ್ಲಿಂದ ಹೊರಟಾಗ ಸರಿಯಾಗಿತ್ತು.  
ಹೊಸೂರು ರಸ್ತೆ ತಲುಪುವ ಹೊತ್ತಿಗೆ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಸಂಚಾರ ದಟ್ಟಣೆ ತೀವ್ರವಾಗಿತ್ತು. ರಾಮಮೂರ್ತಿ ನಗರ ತಲುಪುವ ಹೊತ್ತಿಗೆ ಮತ್ತೆ ಬಸ್ಸು ಕೆಟ್ಟು ಹೋಗಿ ನಿಂತಿತು. ಅಲ್ಲಿ ಸುಮಾರು 20 ನಿಮಿಷ ಕಾದರು. ಆದರೆ ದುರಸ್ತಿಯಾಗದ ಹಿನ್ನೆಲೆಯಲ್ಲಿ ಅಲ್ಲಿ ತಡವಾಗಿದ್ದರಿಂದ ಕಲ್ಕೆರೆಗೆ ಹೋಗದೆ ತಮ್ಮ ತಮ್ಮ ಕಾರುಗಳಲ್ಲಿ ಮುಖ್ಯಮಂತ್ರಿ ಮತ್ತು ಸಚಿವರು ತೆರಳಿದರು.
ನಗರದ ಹೆಚ್ ಎಸ್ ಆರ್ ಲೇ ಔಟ್ ನಲ್ಲಿ ಮುಂಗಾರು ಮಳೆ  ಸಂದರ್ಭದಲ್ಲಿ ಪ್ರತಿವರ್ಷ  ಪ್ರವಾಹದಿಂದ ತಲೆದೋರುವ ಸಮಸ್ಯೆಗಳನ್ನು ನಿವಾರಿಸಲು ಕ್ರಮ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಯೋಚಿಸುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಪಾಲಿಕೆಯ ಕಾಮಗಾರಿಗಳ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಕಾಮಗಾರಿಗೆ ತಡೆಗೋಡೆಗಳನ್ನು ಕಟ್ಟಲು 800 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಈ ಭಾಗದ ಜನರ ಸಮಸ್ಯೆಗೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ. ನಗರದ ಜನತೆಯ ಸಮಸ್ಯೆಗಳನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎಂದು ಆರೋಪಿಸಿದರು.

ಬೆಂಗಳೂರು ನಗರದಲ್ಲಿ ಸುಮಾರು 830 ಕಿಲೋ ಮೀಟರ್ ಒಳಚರಂಡಿ ಮತ್ತು ನೀರಿನ ಜಾಲವಿದ್ದು ಅದರಲ್ಲಿ 400 ಕಿಲೋ ಮೀಟರ್ ವರೆಗೆ ಕಾಮಗಾರಿ ಮಾಡಲಾಗಿದೆ. ಇತ್ತೀಚಿನ ಪ್ರವಾಹ ನಂತರ 300 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಅವುಗಳಲ್ಲಿ 65 ಕೋಟಿ ರೂಪಾಯಿ ಕೇವಲ ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಮಾತ್ರ ಮೀಸಲಾಗಿದೆ. ಚರಂಡಿ ಕಾಮಗಾರಿಗೆ ಮುಂದಿನ ಬಜೆಟ್ ನಲ್ಲಿ ಇನ್ನೂ 1,500 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com