ವಿಜಯದಶಮಿಯ ಜಂಬೂ ಸವಾರಿಗೆ ಅಲಂಕೃತಗೊಂಡಿರುವ ಮೈಸೂರು

ಮೈಸೂರು ನಗರಿಯ ಪರಂಪರೆ, ಇತಿಹಾಸ, ಸಂಸ್ಕೃತಿಯನ್ನು ಸಾರುವ 400 ವರ್ಷಗಳ ಹಿಂದಿನ ಸಂಪ್ರದಾಯದ...
ಮೈಸೂರು ಅರಮನೆ ಮುಂದೆ ದಸರಾಕ್ಕೆ ಸಿದ್ದತೆ
ಮೈಸೂರು ಅರಮನೆ ಮುಂದೆ ದಸರಾಕ್ಕೆ ಸಿದ್ದತೆ
ಸೂರು: ಮೈಸೂರು ನಗರಿಯ ಪರಂಪರೆ, ಇತಿಹಾಸ, ಸಂಸ್ಕೃತಿಯನ್ನು ಸಾರುವ 400 ವರ್ಷಗಳ ಹಿಂದಿನ ಸಂಪ್ರದಾಯದ ದಸರಾ ಹಬ್ಬದ ಕೊನೆಯ ದಿವಸ ವಿಜಯದಶಮಿಯ ಜಂಬೂ ಸವಾರಿಗೆ ಮೈಸೂರು ನಗರ ಸಿದ್ಧತೆ ಮಾಡಿಕೊಂಡಿದೆ. ಮೈಸೂರಿನ ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ಇದನ್ನು ಹತ್ತಿರದಿಂದ ಕಣ್ತುಂಬ ನೋಡಿ ಸವಿಯಲು ದೇಶ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಮೈಸೂರು ಅರಮನೆಯಿಂದ ಚಿನ್ನದ ಅಂಬಾರಿಯನ್ನು ಹೊತ್ತ ಆನೆ ರಾಜ ಗಾಂಭೀರ್ಯದಿಂದ ನಗರದ ರಸ್ತೆಯಲ್ಲಿ ಹೆಜ್ಜೆಯನ್ನಿಡುತ್ತಾ ಬನ್ನಿಮಂಟಪ ಕ್ರೀಡಾಂಗಣಕ್ಕೆ ಸಾಗುತ್ತದೆ.
ಮೈಸೂರು ಸುತ್ತಮುತ್ತ ಬರದ ಹಿನ್ನೆಲೆಯಲ್ಲಿ ಈ ಹಿಂದಿನ ಕೆಲ ವರ್ಷಗಳಲ್ಲಿ ದಸರಾವನ್ನು ಅಷ್ಟೊಂದು ಅದ್ದೂರಿಯಾಗಿ ಆಚರಿಸಿರಲಿಲ್ಲ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಉತ್ಸಾಹದಿಂದ ದಸರಾ ಆಚರಿಸಲಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜಯದಶಮಿಯ ಜಂಬೂ ಮೆರವಣಿಗೆಗೆ ಬಲರಾಮ ಗೇಟಿನಲ್ಲಿ ನಂದಿ ಧ್ವಜಕ್ಕೆ ನಾಳೆ ಮಧ್ಯಾಹ್ನ 2.15ಕ್ಕೆ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಅಂಬಾರಿ ಹೊರುವ ಅರ್ಜುನ ಆನೆಯೊಂದಿಗೆ ಮಾವುತ ವಿನು 
ಮುಖ್ಯಮಂತ್ರಿಗಳ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ನಗರ ಮೇಯರ್, ಉಪ ಮೇಯರ್ ಮತ್ತು ಪೊಲೀಸ್ ಆಯುಕ್ತರು ಭಾಗವಹಿಸಲಿದ್ದಾರೆ. ಅರ್ಜುನ ಆನೆ ಹೊರುವ 750 ಕೆ.ಜಿ ತೂಕದ ಚಿನ್ನದ ಅಂಬಾರಿಯೊಳಗಿರುವ ಚಾಮುಂಡೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಲಿದ್ದಾರೆ. ಮೈಸೂರು ರಾಜರು ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ಮುಗಿಸಿದ ನಂತರ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ.
ಈ ಬಾರಿ ದಸರಾ ಜಂಬೂ ಮೆರವಣಿಗೆ ಗುಣಮಟ್ಟ ಹೆಚ್ಚಿಸಲು ಸ್ಥಬ್ದಚಿತ್ರಗಳ ಸಂಖ್ಯೆಯನ್ನು 40ಕ್ಕೆ ಮಿತಿಗೊಳಿಸಲಾಗಿದೆ. ಈ ಸ್ಥಬ್ದಚಿತ್ರಗಳು ಮೈಸೂರಿನ ಹಿಂದಿನ ರಾಜರ ಆಳ್ವಿಕೆ, ಕನ್ನಡ ನಾಡಿಗೆ ಅವರ ಕೊಡುಗೆ, ನೀರಿನ ಸಂರಕ್ಷಣೆ ಮತ್ತು ಇತರ ವಿಷಯಗಳ ಕುರಿತು ಮಹತ್ವ ಸಾರುವ ಚಿತ್ರಗಳಾಗಿವೆ. ರಾಜ್ಯದ 30 ಜಿಲ್ಲೆಗಳ ವಿವಿಧ ನಿಗಮ ಮತ್ತು ಮಂಡಳಿಗಳ ಅಭಿವೃದ್ಧಿ ಕುರಿತು ಸ್ಥಬ್ಧ ಚಿತ್ರಗಳು ತೋರಿಸಲಿವೆ. ಸ್ಥಬ್ಧಚಿತ್ರಗಳ ಹಿಂದೆ ಸಾಂಸ್ಕೃತಿಕ ತಂಡಗಳು, ಜಾನಪಪದ ಕಲಾವಿದರ ಪ್ರದರ್ಶನ, ಪೊಲೀಸ್, ರೈಲ್ವೆ, ಕೆಎಸ್ಆರ್ ಪಿ, ಎನ್ ಸಿಸಿ ಮತ್ತು ಇತರ ಪೊಲೀಸ್ ಬ್ಯಾಂಡ್ ಗಳ ಕವಾಯತು ನಡೆಯಲಿವೆ.
12 ದಸರಾ ಆನೆಗಳು 2 ಗಂಟೆಯೊಳಗೆ 5 ಕಿಲೋ ಮೀಟರ್ ದೂರ ಮೆರವಣಿಗೆ ಸಾಗಲಿವೆ. ವಿಜಯದಶಮಿ ದಿನ ಚಿನ್ನದ ಅಂಬಾರಿ ಹೊರುವ ಆನೆಗೆ 45 ದಿನಗಳ ಅಭ್ಯಾಸ ಮಾಡಿಸಲಾಗುತ್ತದೆ. ಮೆರವಣಿಗೆ ನಂತರ ಬನ್ನಿಮಂಟಪದಲ್ಲಿ ಪಂಜಿನ ಬೆಳಕಿನ ಮೆರವಣಿಗೆ ನಡೆಯಲಿದೆ. ಅದರಲ್ಲಿ ರಾಜ್ಯಪಾಲರು ಭಾಗವಹಿಸಲಿದ್ದಾರೆ.
ಅರ್ಜುನ ಆನೆ ಸತತ 7ನೇ ವರ್ಷ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರುತ್ತಿದೆ. ಈ ಆನೆಗೆ ವಿನು ಎಂಬುವವರು ಮಾವುತರಾಗಿದ್ದಾರೆ. ಫೇಸ್ಬುಕ್ ನಲ್ಲಿ ಜಂಬೂ ಮೆರವಣಿಗೆಯ ನೇರ ಪ್ರಸಾರಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com