ಧಾರವಾಡ: ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 2.55 ಕೋಟಿ ಮೌಲ್ಯದ 7.722 ಕೆ.ಜಿ. ಚಿನ್ನಾಭರಣಗಳನ್ನು ಧಾರವಾಡ ಗ್ರಾಮಾಂತರ ಪೋಲೀಸರು ವಶಪಡಿಸಿಕೊಂಡಿದ್ದಾರೆ.
ಕಲಘಟಗಿ ವಿಧಾನಸಭಾ ಕ್ಷೇತ್ರ ಅಳ್ನಾವರ ಸಮೀಪದ ಕಡಬಗಸ್ತಿ ಚೆಕ್ ಪೋಸ್ಟ್ನಲ್ಲಿ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ದಾಖಲೆಗಳಿಲ್ಲದೆ ಗೋವಾದಿಂದ ಹುಬ್ಬಳ್ಳಿಗೆ ಚಿನ್ನ ಸಾಗಣೆ ಮಾಡಲಾಗುತ್ತಿತ್ತೆಂದು ತಿಳಿದು ಬಂದಿದೆ.
"ಚುನಾವಣೆ ವೇಳೆ ಮತದಾರರಿಗೆ ಹಂಚುವದಕ್ಕಾಗಿ ಈ ಆಭರಣ ಸಾಗಾಟ ನಡೆದಿತ್ತು ಚೆಕ್ಪೋಸ್ಟ್ನಲ್ಲಿ ಮಧ್ಯಾಹ್ನ 12.30ರ ಹೊತ್ತಿಗೆ ಕಾರನ್ನು ತಡೆದು ತಪಾಸಣೆ ಮಾಡಿದಾಗ ಅಪಾರ ಪ್ರಮಾಣದ ಆಭರಣಗಳು ಪತ್ತೆಯಾಗಿದೆ.ಎಂದು ಚುನಾವಣಾಧಿಕಾರಿ ಜಿಲ್ಲಾ ಅಂತರ್ಜಲ ಭೂವಿಜ್ಞಾನಿ ರಾಜಶೇಖರ ರೆಡ್ಡಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದ ಸಂಬಂಧ ಗೋವಾ ಪಿ.ಕೆ. ಆಭರಣ ಅಂಗಡಿಯ ಮಾಲೀಕ ಪ್ರತೀಕ ನಾರ್ವೇಕರ್ ಹಾಗೂ ರಾಜಸ್ಥಾನದ ವಿಕ್ರಮಸಿಂಗ್ ರಾಥೋಡ್ ಅವರುಅಗಳನ್ನು ಪೊಲೀಸರು ಬಂಧಿಸಿದ್ದು ಆರೋಪಿಗಳು ತಮ್ಮ ಕಾರಿನಲ್ಲಿ 44 ಬಳೆಗಳಿರುವ 4 ಬಾಕ್ಸ್ ಮತ್ತು ತಲಾ 10 ಮಂಗಳಸೂತ್ರಗಳಿರುವ ಮೂರು ಬಾಕ್ಸ್ಗಳನ್ನು ಹುಬ್ಬಳ್ಳಿಗೆ ತರುತ್ತಿದ್ದರು.
ಆಭರಣವನ್ನು ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತೆನ್ನುವುದು ಖಚಿತವಾಗಿಲ್ಲ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ತಿಳಿಸಿದರು.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಡಾ.ಎಸ್.ಬಿ.ಬೊಮ್ಮನಹಳ್ಳಿ, ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ, ಡಿಸಿಎಫ್ ಮಹೇಶಕುಮಾರ್, ಡಿವೈಎಸ್ ಪಿ ಚಂದ್ರಶೇಖರ, ಚುನಾವಣಾಧಿಕಾರಿ ಡಾ.ಔದ್ರಾಮ ಸೇರಿದಂತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.