
ಬೆಂಗಳೂರು: ಬೆಂಗಳೂರು ಸೆಂಟ್ರಲ್ ಯೂನಿವರ್ಸಿಟಿಯ ಸೆಂಟ್ರಲ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವನ್ನು ಮುಚ್ಚಲು ಹೊರಟಿರುವ ಬೆಂಗಳೂರು ವಿಶ್ವವಿದ್ಯಾಲಯ ನಿರ್ಧಾರ ಪದವೀಧರರಾಗಿ ಹೊರಬಂದಿರುವ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಗಳಿಸುವ ಆಕಾಂಕ್ಷೆ ಹೊಂದಿರುವ ವಿದ್ಯಾರ್ಥಿಗಳಿಗೆ ತೀವ್ರ ಬೇಸರವನ್ನುಂಟುಮಾಡಿದೆ.
ವಿಭಾಗದಲ್ಲಿ ಅಗತ್ಯ ಭೋದಕ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ಮುಚ್ಚಲಾಗುತ್ತಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಕಾರಣ ನೀಡುತ್ತಿದ್ದು ಈ ವರ್ಷ ಸ್ನಾತಕೋತ್ತರ ಅಧ್ಯಯನಕ್ಕೆ ಅರ್ಜಿಗಳನ್ನು ಆಹ್ವಾನಿಸಿಲ್ಲ. ಕೋರ್ಸ್ ನ್ನು ರದ್ದುಗೊಳಿಸಲಾಗಿದೆ ಎಂದು ಇತ್ತೀಚೆಗೆ ಅಧಿಸೂಚನೆ ಹೊರಡಿಸಲಾಗಿದೆ.
ಇದರಿಂದ ಪದವಿ ಮುಗಿಸಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಬೇಕೆಂದು ಬಯಸುವ ಬೆಂಗಳೂರು ಉತ್ತರ ಭಾಗದಲ್ಲಿ ನೆಲೆಸಿರುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಲಿದೆ. ಕೆ ಆರ್ ಪುರಂ, ರಾಮಮೂರ್ತಿ ನಗರ ಮೊದಲಾದ ಪ್ರದೇಶಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳು ಇನ್ನು ಮುಂದೆ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಬೇಕೆಂದರೆ ಜ್ಞಾನಭಾರತಿ ಕ್ಯಾಂಪಸ್ ಗೆ ಅಥವಾ ಕೋಲಾರದಲ್ಲಿರುವ ಬೆಂಗಳೂರು ಉತ್ತರ ಯೂನಿವರ್ಸಿಟಿಗೆ ಹೋಗಬೇಕು.
ಕೆ ಆರ್ ಪುರಂನಲ್ಲಿರುವ ವಿದ್ಯಾರ್ಥಿಗಳಿಗೆ ಜ್ಞಾನಭಾರತಿಗೆ ಹೋಗಬೇಕೆಂದರೆ 3 ಗಂಟೆ ಸಮಯ ಬೇಕು, ಮತ್ತೆ ಮನೆಗೆ ಬರಲು 3 ಗಂಟೆ ಬೇಕು. ಈ ಮಧ್ಯೆ ವಿದ್ಯಾರ್ಥಿಗಳು 6 ಗಂಟೆಗಳ ತರಗತಿಗೆ ಹೋಗಬೇಕು. ಈ ವಿದ್ಯಾರ್ಥಿಗಳ ಪರಿಸ್ಥಿತಿ ಹೇಗಾಗಬೇಡ ಎಂದು ಕೇಳುತ್ತಾರೆ ಸೆಂಟ್ರಲ್ ಕಾಲೇಜಿನಲ್ಲಿ ಭೋದಿಸುತ್ತಿದ್ದ ಉಪನ್ಯಾಸಕರೊಬ್ಬರು. ಈ ಮಧ್ಯೆ ಇದೇ ಕಾಲೇಜಿನಲ್ಲಿ ಭೋದಿಸುತ್ತಿದ್ದ ಹಿರಿಯ ಉಪನ್ಯಾಸಕರು ಸಹ ಬೆಂಗಳೂರು ಸೆಂಟ್ರಲ್ ಯೂನಿವರ್ಸಿಟಿಯ ನಿರ್ಧಾರಕ್ಕೆ ಬೇಸರಗೊಂಡಿದ್ದಾರೆ. ಈ ವರ್ಷ ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ ಪಡೆಯುತ್ತಿರುವವರಿಗೆ ತರಗತಿಗಳು ನಡೆಯುತ್ತಿದ್ದು ಇವರ ತಂಡ ಕೊನೆಯದಾಗಲಿದೆ.
ಇಲ್ಲಿ ಭೋದಕ ಸಿಬ್ಬಂದಿ ಕೊರತೆ ಮತ್ತು ಮೂಲಭೂತ ಸೌಕರ್ಯಗಳು ಸರಿಯಾಗಿಲ್ಲ ಎಂಬ ಕಾರಣ ನೀಡುತ್ತಾರೆ. ಆದರೆ ಪತ್ರಿಕೋದ್ಯಮ ತರಗತಿಗಳನ್ನು ನಡೆಸಲು ಹೆಚ್ಚಿನ ಮೂಲಭೂತ ಸೌಕರ್ಯಗಳು ಬೇಕಾಗುವುದಿಲ್ಲ. ಪ್ರಯೋಗಾಲಯ, ಸ್ಟುಡಿಯೊಗಳ ಅಗತ್ಯವಿಲ್ಲ. ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಮಾತ್ರ ಬೇಕಾಗಬಹುದು. ಬೇರೆ ಕೋರ್ಸ್ ಗಳಿಗೆ ಭೋದಕ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಇಲ್ಲಿ ಕೂಡ ಮಾಡಬಹುದು. ಅತಿಥಿ ಉಪನ್ಯಾಸಕರನ್ನು ಸಹ ನೇಮಕ ಮಾಡಬಹುದು ಎಂದು ವಿಶ್ವವಿದ್ಯಾಲಯದ ಮತ್ತೊಬ್ಬ ಹಿರಿಯ ಉಪನ್ಯಾಸಕರು ಹೇಳುತ್ತಾರೆ.
ಈ ಬಗ್ಗೆ ಬೆಂಗಳೂರು ಸೆಂಟ್ರಲ್ ಯೂನಿವರ್ಸಿಟಿಯ ಅಧಿಕಾರಿಗಳನ್ನು ಕೇಳಿದರೆ ಇದು ತಾತ್ಕಾಲಿಕ ಕ್ರಮವಷ್ಟೆ ಎನ್ನುತ್ತಾರೆ. ಕೋರ್ಸ್ ನ್ನು ಶಾಶ್ವತವಾಗಿ ಮುಚ್ಚುತ್ತೇವೆ ಎಂದರ್ಥವಲ್ಲ. ಸಿಬ್ಬಂದಿ ಕೊರತೆ ಮತ್ತು ಸೌಕರ್ಯಗಳ ಕೊರತೆಯಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರವೇಶಾತಿ ನೀಡಿಲ್ಲ ಎಂದು ಬೆಂಗಳೂರು ಸೆಂಟ್ರಲ್ ಯೂನಿವರ್ಸಿಟಿಯ ರಿಜಿಸ್ಟ್ರಾರ್ ಪ್ರೊ.ಎಂ ರಾಮಚಂದ್ರ ಗೌಡ ಹೇಳಿದರು.
Advertisement