ಕೆಎಸ್ಆರ್ ಟಿಸಿ ಬಸ್ ನಿಲ್ದಾಣಗಳಲ್ಲಿ 1 ರೂಪಾಯಿಗೆ ಕುಡಿಯುವ ನೀರು

ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣಗಳಿಂದ ಪ್ರಯಾಣಿಸುವ ಪ್ರಯಾಣಿಕರು ಇನ್ನು ಮುಂದೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣಗಳಿಂದ ಪ್ರಯಾಣಿಸುವ ಪ್ರಯಾಣಿಕರು ಇನ್ನು ಮುಂದೆ ಬಸ್ಸಿನಲ್ಲಿ ನೀರು ಕೊಂಡೊಯ್ಯಬೇಕಾಗಿಲ್ಲ ಅಥವಾ ದುಬಾರಿ ಹಣ ಕೊಟ್ಟು ಮಿನರಲ್ ವಾಟರ್ ಖರೀದಿಸಬೇಕಾಗಿಲ್ಲ.

ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ರಿವರ್ಸ್ ಒಸ್ಮೊಸಿಸ್ ಘಟಕಗಳನ್ನು ಸ್ಥಾಪಿಸಲು ನಿಗಮ ಮುಂದಾಗಿದೆ. ಮಂಡ್ಯ ವಿಭಾಗದ ಶ್ರೀರಂಗಪಟ್ಟಣ ಬಸ್ ನಿಲ್ದಾಣದ ಸಮೀಪ ಪಾಂಡವಪುರದಲ್ಲಿ 5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರಸಕ್ತ ವರ್ಷ ರಾಜ್ಯಾದ್ಯಂತ 156 ಬಸ್ ನಿಲ್ದಾಣಗಳಲ್ಲಿ ಇಂತಹ ಘಟಕ ಸ್ಥಾಪಿಸಲು ಮುಂದಾಗಿದೆ.

ಪ್ರಯಾಣಿಕರಿಗೆ ನೀಡುವ ಅರ್ಧ ಲೀಟರ್ ನೀರಿಗೆ 1 ರೂಪಾಯಿ ಮತ್ತು ಒಂದು ಲೀಟರ್ ಗೆ 2 ರೂಪಾಯಿ ಮತ್ತು 5 ಲೀಟರ್ ಗೆ 5 ರೂಪಾಯಿ ನಿಗದಿಪಡಿಸಲಿದೆ.

ಈ ಬಗ್ಗೆ ವಿವರಣೆ ನೀಡಿದ ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್ ಆರ್ ಉಮಾಶಂಕರ್, ರಾಜ್ಯಾದ್ಯಂತ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುತ್ತದೆ. ಆದರೆ ಒಂದು ನಿಲ್ದಾಣದಲ್ಲಿ ಇದ್ದಂತೆ ಇನ್ನೊಂದು ನಿಲ್ದಾಣದಲ್ಲಿ ನೀರಿನ ಮೂಲಗಳು ಇರುವುದಿಲ್ಲ, ಹೀಗಾಗಿ ನೀರಿನ ಶುದ್ಧತೆ ಬಗ್ಗೆ ನಾವು ಖಾತ್ರಿ ನೀಡುವುದಿಲ್ಲ ಎನ್ನುತ್ತಾರೆ. ಆದರೆ ಬಡ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ರಿವರ್ಸ್ ಒಸ್ಮೊಸಿಸ್ ಘಟಕವನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ ಎಂದರು.

ಪಾಂಡವಪುರ ಮತ್ತು ಶ್ರೀರಂಗಪಟ್ಟಣಗಳಲ್ಲಿ ಈಗಾಗಲೇ ನಿರ್ಮಿಸಲಾಗಿದ್ದು, ನಾಗಮಂಗಲ, ಮಳವಳ್ಳಿ, ಮೋಲುಕೋಟೆ, ಕೆ ಆರ್ ಪೇಟೆ, ಹರಪನಹಳ್ಳಿ, ಹರಿಹರ, ಹೊನ್ನಳ್ಳಿ, ಜಗಲೂರು, ಭದ್ರಾವತಿ, ಹಿರಿಯೂರು, ಧರ್ಮಸ್ಥಳ, ಸುಬ್ರಹ್ಮಣ್ಯ ಮತ್ತು ಕುಂದಾಪುರಗಳ ಕೆಎಸ್ಆರ್ ಟಿಸಿ ನಿಲ್ದಾಣಗಳಲ್ಲಿ ಸದ್ಯದಲ್ಲಿಯೇ ನಿರ್ಮಿಸಲಾಗುವುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com