ಬೆಂಗಳೂರು: ನಗರ ಮೂಲದ ಆಭರಣ ಉದ್ಯಮಿಗೆ ಸುಮಾರು 9.11 ಕೋಟಿ ರೂಪಾಯಿ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಕೇಸಿನ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ವಿರುದ್ಧ ಅಪರಾಧ ತನಿಖಾ ವಿಭಾಗ(ಸಿಐಡಿ) ಆರೋಪಪಟ್ಟಿ ಸಲ್ಲಿಸಿದೆ.
ಮೊದಲ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಚಾರ್ಚ್ ಶೀಟ್ ಸಲ್ಲಿಸಲಾಗಿದೆ. 2015ರಲ್ಲಿ ಹರಿಪ್ರಸಾದ್ ಎಸ್ ವಿ ಎಂಬುವವರು ಸಲ್ಲಿಸಿದ ದೂರಿಗೆ ಸಂಬಂಧಪಟ್ಟ ಚಾರ್ಜ್ ಶೀಟ್ ಇದಾಗಿದೆ. ಹರಿಪ್ರಸಾದ್ ನೀಡಿದ್ದ ದೂರಿನಲ್ಲಿ, ಗೀತಾಂಜಲಿ ಜೆಮ್ಸ್ ನ ವ್ಯವಸ್ಥಾಪಕ ನಿರ್ದೇಶಕ ಮೆಹುಲ್ ಚೊಕ್ಸಿ 2012ರಲ್ಲಿ ಗೀತಾಂಜಲಿ ಜೆಮ್ಸ್ ನ ಫ್ರಾಂಚೈಸಿಯನ್ನು ತಮಗೆ ನೀಡಿದ್ದರು.
ಮಾಡಿಕೊಂಡ ಒಪ್ಪಂದದ ಪ್ರಕಾರ ಹರಿಪ್ರಸಾದ್ ಕಂಪೆನಿಗೆ ಸುಮಾರು 9 ಕೋಟಿ ರೂಪಾಯಿ ನೀಡಿದ್ದು, ಅದಕ್ಕೆ ಪ್ರತಿಯಾಗಿ ಕಂಪೆನಿ ಅವರಿಗೆ 15 ಕೋಟಿ ರೂಪಾಯಿ ಬೆಲೆ ಬಾಳುವ ಆಭರಣವನ್ನು ನೀಡಿದೆ ಎಂದು ಹೇಳಿತ್ತು. ಆದರೆ ಗೀತಾಂಜಲಿ ಗ್ರೂಪ್ ತಮಗೆ ನೀಡಿದ್ದು ಕೇವಲ 7 ಕೋಟಿ ರೂಪಾಯಿ ಬೆಲೆಬಾಳುವ ಆಭರಣಗಳು ಎಂದಿದೆ.
ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ನಂತರ ಕೇಸನ್ನು ಸಿಐಡಿಗೆ ವಿಚಾರಣೆಗೆ ಉಲ್ಲೇಖಿಸಲಾಗಿದೆ. ದೂರು ಸಲ್ಲಿಸಿ ಸುಮಾರು 3 ವರ್ಷಗಳ ನಂತರ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಮೆಹುಲ್ ಚೊಕ್ಸಿ ತನ್ನ ಅಳಿಯ ನೀರವ್ ಮೋದಿ ಜೊತೆಗೆ ಪ್ರಸ್ತುತ ಆಂಟಿಗುವಾದಲ್ಲಿ ನೆಲೆಸಿದ್ದು ಇವರಿಬ್ಬರೂ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸುಮಾರು 14 ಸಾವಿರ ಕೋಟಿ ರೂಪಾಯಿ ವಂಚಿಸಿದ ಪ್ರಕರಣದ ಆರೋಪಿಗಳಾಗಿದ್ದಾರೆ.
Advertisement