ವಿಚಾರವಾದಿಗಳ ಹತ್ಯೆಗಾಗಿ 22 ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ: ಎಸ್ಐಟಿ ತನಿಖೆಯಿಂದ ಬಹಿರಂಗ

ಬಲಪಂಥೀಯ ಹಿಂದೂತ್ವ ಗ್ರೂಪ್ ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿರುವ ವಿಚಾರವಾದಿಗಳ ಹತ್ಯೆಗಾಗಿ 22 ಯುವಕರಿಗೆ ...
ಗೌರಿ ಲಂಕೇಶ್
ಗೌರಿ ಲಂಕೇಶ್
ಬೆಂಗಳೂರು: ಬಲಪಂಥೀಯ ಹಿಂದೂತ್ವ ಗ್ರೂಪ್ ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿರುವ ವಿಚಾರವಾದಿಗಳ ಹತ್ಯೆಗಾಗಿ 22 ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿದೆ ಎಂಬ ಆಘಾತಕಾರಿ ಮಾಹಿತಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯ ವೇಳೆ ಬಹಿರಂಗವಾಗಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಬಂಧಿಸಿರುವ ನಾಲ್ವರು ಆರೋಪಿಗಳಾದ ಅಮೋಲ್ ಕಾಳೆ, ಹಿಂದೂ ಜನಜಾಗೃತಿ ಸಮಿತಿ ಮಾಜಿ ಸಂಚಾಲಕ ಸುಜೀತ್ ಕುಮಾರ್,  ಹಿಂದೂ ಜನಜಾಗೃತಿ ಸಮಿತಿ ಮಾಜಿ ಕಾರ್ಯಕರ್ತ ರಾಜೇಶ್ ಬಂಗೆರಾ, ಹಾಗೂ ಭರತ್ ಕುರ್ನೆ ಅವರು 22 ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿದ್ದಾರೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ವಿಚಾರಿವಾದಿಗಳ ಹತ್ಯೆಗೆ ಸಂಚು ರೂಪಿಸಿದ್ದನ್ನು ಅಮೋಲ್ ಕಾಳೆ ಒಪ್ಪಿಕೊಂಡಿದ್ದಾನೆ ಎಂದು ಎಸ್ ಐಟಿ ಮೂಲಗಳು ತಿಳಿಸಿವೆ. ಅಲ್ಲದೆ ಕಾಳೆ ತನಗೆ ಪರಿಚಯವಿರುವವರಿಂದ 60 ಯುವಕರ ವಿಳಾಸ ಪಡೆದು, ಪ್ರತಿಯೊಬ್ಬ ಯುವಕನನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅವರ ಬಗ್ಗೆ ಮಾಹಿತಿ ಕಲೆ ಹಾಕಿದ್ದ. 60 ಯುವಕರ ಪೈಕಿ 22 ಯುವಕರನ್ನು ಮಾತ್ರ ಶಸ್ತ್ರಾಸ್ತ್ರ ತರಬೇತಿಗೆ ಆಯ್ಕೆ ಮಾಡಿದ್ದ. ಆ ಪೈಕಿ ವಿಜಯಪುರದ ಪರಶುರಾಮ್ ವಾಘ್ಮೋರೆ ಸಹ ಒಬ್ಬ ಎಂದು ಎಸ್ ಐಟಿ ಮೂಲಗಳು ತಿಳಿಸಿವೆ.
ಅಮೋಲ್ ಕಾಳೆ ಶಸ್ತ್ರಾಸ್ತ್ರ ತರಬೇತಿಗಾಗಿ ಬೆಳಗಾವಿ, ಮಡಿಕೇರಿ, ಗೋವಾ ಹಾಗೂ ಪುಣೆಯಲ್ಲಿ ಜಾಗ ಗುರುತಿಸಿದ್ದ. ಯಾರಿಗೂ ಅನುಮಾನ ಬಾರದಂತೆ ಅದೇ ಸ್ಥಳಗಳಲ್ಲಿ ಯುವಕರಿಗೆ ತರಬೇತಿ ಕೊಡಿಸಿದ್ದ. ತರಬೇತಿ ಪಡೆದ ಯುವಕರ ಪೈಕಿ ಕೆಲವರ ಮಾಹಿತಿ ಮಾತ್ರ ಸಿಕ್ಕಿದೆ. ಅದನ್ನು ಮಹಾರಾಷ್ಟ್ರ ಮತ್ತು ಗೋವಾ ಪೊಲೀಸರಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com