ಮೈಸೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮವನ್ನು ಕಾವೇರಿ ನದಿಯಲ್ಲಿ ವಿಸರ್ಜಿಸಲು ರಾಜ್ಯ ಬಿಜೆಪಿ ಘಟಕ ತೀರ್ಮಾನಿಸಿದ್ದು ಇದೇ ಆ.23ಕ್ಕೆ ವಾಜಪೇಯಿ ಚಿತಾಭಸ್ಮವನ್ನು ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಸಮರ್ಪಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
"ದೇಶದ ಎಲ್ಲಾ ಪವಿತ್ರ ನದಿಗಳಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಅಸ್ಥಿ ವಿಸರ್ಜನೆ ಕಾರ್ಯಕ್ರಮ ಇದೆ. ಇದರ ಅಂಗವಾಗಿ ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಸಹ ಅವರ ಚಿತಾಭಸ್ಮ ಸಮರ್ಪಣೆ ಮಾಡಲಾಗುತ್ತದೆ." ಯಡಿಯೂರಪ್ಪ ಹೇಳಿದ್ದಾರೆ.
ದೆಹಲಿ ಬಿಜೆಪಿ ಕಛೇರಿಯಲ್ಲಿರುವ ಮಾಜಿ ಪ್ರಧಾನಿಗಳ ಅಸ್ಥಿಯನ್ನು ಬೆಂಗಳೂರಿಗೆ ತರಲಾಗುವುದು, ಅದನ್ನು ಶ್ರೀರಂಗಪಟ್ಟಣಕ್ಕೆ ಕೊಂಡೊಯ್ದು ಅಲ್ಲಿ ಕಾವೇರಿಯಲ್ಲಿ ವಿಸರ್ಜಿಸಲಾಗುತ್ತದೆ.
ಮಹಾತ್ಮಾ ಗಾಂಧಿ ಸೇರಿ ದೇಶದ ನಾನಾ ಗಣ್ಯರ ಚಿತಾಭಸ್ಮವನ್ನು ಕಾವೇರಿ ನದಿಯಲ್ಲಿ ಹರಿದು ಬಿಡಲಾಗಿದೆ.
ಆ. 23ರ ಕಾರ್ಯಕ್ರಮದಲ್ಲಿ ಯಡಿಯೂರಪ್ಪ, ಆರ್. ಅಶೋಕ್ ಸೇರಿ ಅನೇಕ ನಾಯಕರು ಭಾಗವಹಿಸಲಿದಾರೆ.
ಗಂಗಾ-ಕಾವೇರಿ ಜೋಡಣೆ ವಾಜಪೇಯಿಯವರ ಕನಸಾಗಿತ್ತು. ಇದಕ್ಕಾಗಿ ಅವರ ಚಿತಾಭಸ್ಮವನ್ನು ಕಾವೇರಿಉ ನದಿಯಲ್ಲಿ ವಿಸರ್ಜಿಸುತ್ತಿದ್ದೇವೆ ಎಂದು ಮೈಸೂರು ಜಿಲ್ಲಾ ಬಿಜೆಪಿ ಮುಖಂಡರು ಹೇಳಿದ್ದಾರೆ.
ಇನ್ನು ರಾಜ್ಯದಲ್ಲಿನ ಪ್ರಮುಖ ನದಿಗಳಾದ ನೇತ್ರಾವತಿ, ಶರಾವತಿ, ಕಾರಂಜ, ಭದ್ರಾ, ತುಂಗಾ, ಮಲಪ್ರಭಾ, ಕೃಷ್ಣಾ ನದಿಗಳಲ್ಲಿ ಸಹ ಅಟಲ್ ಅವರ ಸ್ಥಿ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ ಎಂದು ಪಕ್ಷದ ಮೂಲಗಳು ಹೇಳಿದೆ.