ಮಡಿಕೇರಿ: ಪ್ರವಾಹಪೀಡಿತ ಮತ್ತು ಭೂ ಕುಸಿತವಾದ ಕೊಡಗು ಜಿಲ್ಲೆಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ನಿನ್ನೆ ಹಿಂತೆಗೆದುಕೊಳ್ಳಲಾಗಿದೆ. ವಾರದ ಹಿಂದೆ ಪ್ರವಾಹ ಸಂಭವಿಸಿದ ದಿನದಿಂದ ಸುಮಾರು 1,100 ಮಂದಿ ಭಾರತೀಯ ಸೇನೆ, ನೌಕಾಪಡೆ, ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್, ಸಿವಿಲ್ ಡಿಫೆನ್ಸ್ ಮತ್ತು ಪೊಲೀಸರ ತಂಡ ಸಿಬ್ಬಂದಿ 1,735 ಮಂದಿಯನ್ನು ಕಾಪಾಡಿವೆ.
ರಕ್ಷಣಾ ಇಲಾಖೆಯ ವಿಶೇಷ ಪಡೆ 1,735 ಜನರನ್ನು ರಕ್ಷಿಸಿದ್ದು ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದ ಸುಮಾರು 5 ಸಾವಿರ ಮಂದಿಯನ್ನು ಕಾಪಾಡಿದ್ದಾರೆ ಎಂದು ಎಡಿಜಿಪಿ ಭಾಸ್ಕರ್ ರಾವ್ ಹೇಳಿದ್ದಾರೆ.
ಕೊಡಗಿನಲ್ಲಿ ಸದ್ಯ ರಕ್ಷಣಾ ಕಾರ್ಯವನ್ನು ಹಿಂತೆಗೆದುಕೊಳ್ಳಲಾಗಿದ್ದು ಕೆಲವು ತಂಡಗಳನ್ನು ತುರ್ತು ಕಾರ್ಯಕ್ಕೆ ಜಿಲ್ಲಾ ಕೇಂದ್ರದಲ್ಲಿ ಇರಿಸಿವೆ. ಸದ್ಯ ಜಿಲ್ಲೆಯಲ್ಲಿ ರಕ್ಷಣೆ, ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳು ಸುಮಾರಾಗಿ ಮುಗಿದಿದ್ದು ಮುಂದಿನ ಕಾರ್ಯ ಕೊಡಗನ್ನು ಮೊದಲಿನಂತೆ ಸಹಜ ಸ್ಥಿತಿಗೆ ತರುವುದಾಗಿದೆ, ಗರುಡ ಪಡೆ ಮತ್ತು ನಕ್ಸಲ್ ವಿರೋಧಿ ಪಡೆ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದೆ. ಇದೀಗ ರಕ್ಷಣಾ ಕಾರ್ಯ ಮುಗಿದಿದ್ದು ಜಿಲ್ಲಾಡಳಿತ ಪೊಲೀಸ್ ತಂಡದೊಂದಿಗೆ ಕಣ್ಮರೆಯಾದವರ ಪತ್ತೆಯಲ್ಲಿ ಮತ್ತು ಮೃತಪಟ್ಟವರ ಶವವನ್ನು ಹುಡುಕುವಲ್ಲಿ ನಿರತವಾಗಿದೆ ಎಂದು ಭಾಸ್ಕರ್ ರಾವ್ ಹೇಳಿದರು.
ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಜಿಲ್ಲೆಗೆ 8 ಡ್ರೋನ್ ಕ್ಯಾಮರಾಗಳನ್ನು 16 ಕಾರ್ಯನಿರ್ವಹಣೆದಾರರೊಂದಿಗೆ ಕೊಡಗಿಗೆ ಕಳುಹಿಸಿದ್ದಾರೆ. ಜಿಲ್ಲೆಯ ಭೂಕುಸಿತ ಗ್ರಾಮಗಳಲ್ಲಿ ಡ್ರೋನ್ ತಂಡ ಕಾರ್ಯವಹಿಸಲಿದ್ದು ಸಿಕ್ಕಿಹಾಕಿಕೊಂಡಿರುವ ಜನರನ್ನು ಗುರುತಿಸುವ ಕಾರ್ಯ ಮಾಡಲಿದೆ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.
ಡ್ರೋನ್ ಮುಕ್ಕೋಡ್ಲು, ಮಡಿಕೇರಿ, ನಾಪೊಕ್ಲು, ಜೋಡುಪಾಳ, ಮಾದಾಪುರ ಮತ್ತು ಸಂಪಾಜೆ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲಿದೆ. ಪ್ರಕೃತಿ ವಿಕೋಪದಲ್ಲಿ ಡ್ರೋನ್ ಕ್ಯಾಮರಾಗಳನ್ನು ಬಳಸುತ್ತಿರುವುದು ಇದೇ ಮೊದಲು.
ಖಾಸಗಿ ಸಂಸ್ಥೆಗಳಿಗೆ ಕೊಡುಗೆ ಬೇಡ: ಕೊಡಗು ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುವವರು ಖಾಸಗಿ ಸಂಘ ಸಂಸ್ಥೆಗಳಿಗೆ ತಮ್ಮ ಕೊಡುಗೆಯನ್ನು ಹಣವನ್ನು ನೀಡುವುದು ಬೇಡ ಬದಲಾಗಿ ಮುಖ್ಯಮಂತ್ರಿಯವರ ಅಧಿಕೃತ ಪರಿಹಾರ ನಿಧಿಗೆ ನೀಡುವಂತೆ ಸಾರ್ವಜನಿಕರಲ್ಲಿ ಅವರು ಕೋರಿದ್ದಾರೆ.
Advertisement