ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಅವರು ಸೋಮವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.
ಚಳಿ ಜ್ವರ, ರಕ್ತದಲ್ಲಿನ ಸೋಂಕು, ಪಿತ್ತನಾಳ ಹಾಗೂ ಮೇದೋಜೀರಕ ಗ್ರಂಥಿ ಸಮಸ್ಯೆಯಿಂದ ಬಳಲುತ್ತಿರುವ ಶಿವಕುಮಾರ ಸ್ವಾಮೀಜಿ ಅವರಿಗೆ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ವೈದ್ಯರು ನಿನ್ನೆ ಯಶಸ್ವಿಯಾಗಿ ಆರನೇ ಬಾರಿ ಎರಡು ಸ್ಟಂಟ್ ಅಳವಡಿಸಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರು ಕೆಂಗೇರಿ ಬಳಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಕಳೆದ ಶನಿವಾರ ಸಂಜೆ ದಾಖಲಾಗಿದ್ದರು. ನಿನ್ನೆ ಬೆಳಗ್ಗೆ ತಜ್ಞ ವೈದ್ಯರ ತಂಡ ಅಗತ್ಯ ಪರೀಕ್ಷೆಗಳನ್ನು ನಡೆಸಿ ಬಳಿಕ ಎಂಡೋಸ್ಕೋಪಿ ಮೂಲಕ ಸ್ವಾಮೀಜಿಗಳ ಪಿತ್ತನಾಳಕ್ಕೆ ಎರಡು ಸ್ಟಂಟ್ ಅಳವಡಿಸಿತು.
ಸ್ವಾಮೀಜಿಗಳು ಮಠಕ್ಕೆ ಹೋಗುತ್ತೇನೆ, ಇಲ್ಲಿ ಇರುವುದಿಲ್ಲ ಎಂದು ಹಠ ಮಾಡುತ್ತಿರುವ ಹಿನ್ನಲೆಯಲ್ಲಿ ಇಂದು ಬೆಳಗ್ಗೆ ಒಂದಿಷ್ಟು ಪರೀಕ್ಷೆ ನಡೆಸಿ ವರದಿ ಪಡೆದು ಖಾತರಿಯಾದ ಬಳಿಕವಷ್ಟೇ ತುಮಕೂರಿಗೆ ಕಳುಹಿಸಿಕೊಡಲಿದ್ದೇವೆ. ಸ್ವಾಮೀಜಿ ಅವರು ನಿನ್ನೆ ಸಂಜೆ ಪೂಜೆ ನೆರವೇರಿಸಿದ್ದು, ಪ್ರಸಾದ ಸ್ವೀಕರಿಸಿದ್ದಾರೆ. ನಿನ್ನೆ ಮಧ್ಯಾಹ್ನ, ಸಂಜೆ ವೇಳೆಗೆ ಭಕ್ತಾದಿಗಳಿಗೆ ದರ್ಶನ ನೀಡಿದ್ದಾರೆ ಎಂದು ಆಸ್ಪತ್ರೆಯ ಚೀಫ್ ಮೆಡಿಕಲ್ ಗ್ಯಾಸ್ಟ್ರೋ ಎಂಟರಾಲಾಜಿಸ್ಟ್ ಡಾ.ಬಿ.ಎಸ್.ರವೀಂದ್ರ ತಿಳಿಸಿದ್ದಾರೆ.
Advertisement