ಬೆಂಗಳೂರು: ರಾಜ್ಯದಲ್ಲಿ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇರಿಸಬೇಕೆಂಬ ಸರ್ಕಾರದ ಆದೇಶ ಬಹುದೊಡ್ಡ ಪೂರೈಕೆ ಸಂಸ್ಥೆಯಾಗಿರುವ ಅಕ್ಷಯ ಪಾತ್ರ ಫೌಂಡೇಶನ್ ಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.ರಾಜ್ಯದ ಸುಮಾರು 4.43 ಲಕ್ಷ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸುವ ಅಕ್ಷಯ ಪತ್ರ ಫೌಂಡೇಶನ್ ಸಾತ್ವಿಕ ಆಹಾರವನ್ನು ಒದಗಿಸುತ್ತಾ ಬಂದಿದೆ.
ರಾಜ್ಯ ಸರ್ಕಾರ ಸೂಚಿಸುವ ಆಹಾರದ ಪಟ್ಟಿಯನ್ನು ಅನುಸರಿಸಿ ಮಧ್ಯಾಹ್ನದ ಬಿಸಿಯೂಟ ಪೂರೈಸುವಂತೆ ಅಧಿಕಾರಿಗಳು ಅಕ್ಷಯ ಪಾತ್ರ ಫೌಂಡೇಶನ್ ಗೆ ಸೂಚಿಸಿದ್ದಾರೆ. ಆದರೆ ಇದೀಗ ಈರುಳ್ಳಿ, ಬೆಳ್ಳುಳ್ಳಿ ಸೇರಿಸುವಂತೆ ಹೇಳಿರುವುದರಿಂದ ಅಕ್ಷಯ ಪಾತ್ರ ಫೌಂಡೇಶನ್ 2018-19ನೇ ಸಾಲಿನ ವಾರ್ಷಿಕ ನಿಲುವಳಿ ಒಪ್ಪಂದಕ್ಕೆ ಸಂಸ್ಥೆ ಸಹಿ ಹಾಕಿಲ್ಲ. ಅದು ಸಾತ್ವಿಕ ಆಹಾರವನ್ನು ಪೂರೈಸಲು ಆದ್ಯತೆ ನೀಡುತ್ತಿದೆ. ಒಪ್ಪಂದಕ್ಕೆ ಅಕ್ಷಯ ಪಾತ್ರ ಫೌಂಡೇಶನ್ ಸಹಿ ಹಾಕಿಲ್ಲ ಎಂದು ಮಧ್ಯಾಹ್ನ ಬಿಸಿಯೂಟ ಯೋಜನೆಯ ಜಂಟಿ ನಿರ್ದೇಶಕ ಎಂ ಆರ್ ಮಾರುತಿ ತಿಳಿಸಿದ್ದಾರೆ.
ಈ ಬಗ್ಗೆ ಅಧಿಕೃತ ಹೇಳಿಕೆ ಹೊರಡಿಸಿರುವ ಅಕ್ಷಯ ಪಾತ್ರ ಫೌಂಡೇಶನ್ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಮಾರ್ಗಸೂಚಿಯಂತೆ ಮತ್ತು ರಾಜ್ಯ ಸರ್ಕಾರದ ಸೂಚನೆಯಂತೆ ನಮ್ಮ ಮಧ್ಯಾಹ್ನದ ಬಿಸಿಯೂಟ ಪೂರೈಕೆಯಲ್ಲಿ ಮಕ್ಕಳಿಗೆ ಬೇಕಾದ ಪೌಷ್ಟಿಕಾಂಶಗಳನ್ನು ಒದಗಿಸುತ್ತಿದ್ದೇವೆ. ಮಕ್ಕಳ ಬೆಳವಣಿಗೆಗೆ ಪೌಷ್ಟಿಕಯುಕ್ತ, ಗುಣಮಟ್ಟದ, ಸ್ವಚ್ಛ ಆಹಾರ ಒದಗಿಸುವುದು ನಮ್ಮ ಉದ್ದೇಶವಾಗಿದೆ ಎಂದಿದೆ.
ಅಕ್ಷಯ ಪಾತ್ರ ಫೌಂಡೇಶನ್ ಹೊರತುಪಡಿಸಿ ರಾಜ್ಯ ಸರ್ಕಾರದಡಿ ಮಧ್ಯಾಹ್ನದ ಬಿಸಿಯೂಟ ಪೂರೈಸುತ್ತಿರುವ ಎಲ್ಲಾ ಸರ್ಕಾರೇತರ ಸಂಘಟನೆಗಳು ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸುತ್ತಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂ ಆರ್ ಮಾರುತಿ, ಮಧ್ಯಾಹ್ನದ ಬಿಸಿಯೂಟದಲ್ಲಿ ಬೆಳ್ಳುಳ್ಳಿ, ಈರುಳ್ಳಿ ಸೇರಿಸಿದರೆ ಹೆಚ್ಚು ಪೌಷ್ಟಿಕಾಂಶ ಸಿಗುತ್ತದೆ ಜೊತೆಗೆ ರುಚಿಯೂ ಹೆಚ್ಚುತ್ತದೆ. ಹೀಗಾಗಿ ಆ ಪದಾರ್ಥಗಳನ್ನು ಸೇರಿಸಲು ಹೇಳಿದೆವು. ಆದರೆ ಅಕ್ಷಯ ಪಾತ್ರ ಫೌಂಡೇಶನ್ ನಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದಾರೆ.
Advertisement