ಕೆರೆಗಳ ಹರಿಕಾರ ಮಂಡ್ಯದ ಕಾಮೇಗೌಡರಿಂದ 15ನೇ ಕೆರೆ ನಿರ್ಮಾಣಕ್ಕೆ ಚಿಂತನೆ

ಗ್ರಾಮದಲ್ಲಿನ ನೀರಿನ ಸಮಸ್ಯೆ ಬಗೆಹರಿಸಲು ಸಾಲು ಸಾಲು ಕೆರೆಗೆಳ ನಿರ್ಮಾಣ ಮಾಡಿ ನಿಜವಾದ "ಕಾಯಕಯೋಗಿ" ಎಂದು ಖ್ಯಾತವಾದ ಮಳವಳ್ಳಿಯ ಕಾಮೇಗೌಡ ಇದೀಗ ಹದಿನೈದನೇ ಕೆರ....
ಕಾಮೇಗೌಡ
ಕಾಮೇಗೌಡ
ಬೆಂಗಳೂರು: ಗ್ರಾಮದಲ್ಲಿನ ನೀರಿನ ಸಮಸ್ಯೆ ಬಗೆಹರಿಸಲು ಸಾಲು ಸಾಲು ಕೆರೆಗೆಳ ನಿರ್ಮಾಣ ಮಾಡಿ ನಿಜವಾದ "ಕಾಯಕಯೋಗಿ" ಎಂದು ಖ್ಯಾತವಾದ ಮಳವಳ್ಳಿಯ ಕಾಮೇಗೌಡ ಇದೀಗ ಹದಿನೈದನೇ ಕೆರೆ ನಿರ್ಮಿಸಲು ಮುಂದಾಗಿದ್ದಾರೆ. ಕಾಮೇಗೌಡರಿಗೆ ರಾಜ್ಯದ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿಯನ್ನು ನಿಡಿ ಗೌರವಿಸಲಾಗಿದೆ, ಈ ಪ್ರಶಸ್ತಿ ಮೊತ್ತವನ್ನು ತಾವು ಇನ್ನೊಂದು ಕೆರೆ ನಿರ್ಮಿಸಲು ಬಳಸುವುದಾಗಿ ಅವರು ಹೇಳಿದ್ದಾರೆ.
ಇದೇ ಜುಲೈನಲ್ಲಿ ಪತ್ರಿಕೆ ಕಾಮೇಗೌಡರ ಕುರಿತಂತೆ ವಿಶೇಷ ಲೇಖನವೊಂಡನ್ನು ಪ್ರಕಟಿಸಿತ್ತು.ಹದಿನಾಲ್ಕು ಕೆರೆಗಳನ್ನು ನಿರ್ಮಿಸಿ ಮಳವಳ್ಳಿಯ ದಾಸನದೊಡ್ಡಿಯೆಂಬ ಗ್ರಾಮವನ್ನು ಹಸಿರ ಸಿರಿ ಕಂಗೊಳಿಸುವಂತೆ ಮಾಡಿದ್ದ ಇವರಿಗೆ ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿದ್ದರು. ಈ ವೇಳೆ ಒಂದು ಲಕ್ಷ ನಗದು ಹಾಗೂ 25  ಗ್ರಾಂ ಚಿನ್ನವನ್ನು ನೀಡಲಾಗಿದ್ದು ಕಾಮೇಗೌಡ ಇದನ್ನು ಹದಿನೈದನೇ ಕೆರೆ ನಿರ್ಮಾಣಕ್ಕೆ ಬಳಸುವುದಾಗಿ ಹೇಳಿದ್ದಾರೆ.
"ಸಧ್ಯ ನಾನು ನಿರ್ಮಾಣ ಮಾಡಿದ ಕೆರೆಗಳ ಗಾತ್ರವನ್ನು ಹೆಚ್ಚಿಸಲು ತೀರ್ಮಾನಿಸಿದ್ದೇನೆ. ಇದಕ್ಕಾಗಿ ಕೆಲಸ ನಡೆದಿದೆ. ಕೆರೆಯ ಗಾತ್ರ ಹೆಚ್ಚಿಸುವ ಮೂಲಕ ಹೆಚ್ಚು ನೀರಿ ಸಂಗ್ರಹಿಸಬಹುದು.ಇದರಿಂದ ಪಶು ಪಕ್ಷಿಗಳಿಗೆ ಅನುಕೂಲವಾಗಲಿದೆ, ನಾನು ಹೊರ ಪ್ರದೇಶದಿಂದ ಜನರನ್ನು ಕರೆಸಿ ಈ ಕೆಲಸ ಮಾಡಿಸುತ್ತೇನೆ" ಪತ್ರಿಕೆಯೊಡನೆ ಮಾತನಾಡಿದ ಕಾಮೇಗೌಡರು ಹೇಳಿದರು.
"ಪ್ರಶಸ್ತಿ ಬಂದಿದೆ, ಅದರ ಜತೆ ಬಂದ ಹಣವನ್ನು ನಾನು ಹದಿನೈದನೇ ಕೆರೆ ನಿರ್ಮಿಸಲು ಬಳಸಿಕೊಳ್ಳುವವನಿದ್ದೇನೆ. ಜನವರಿ ತಿಂಗಳಲ್ಲಿ ಈ ಹೊಸ ಕೆರೆ ನಿರ್ಮಾಣ ಕಾರ್ಯ ಪ್ರಾರಂಬವಾಗಲಿದೆ." ಅವರು ಹೇಳಿದ್ದಾರೆ.
82 ವರ್ಷದ ಕಾಮೇಗೌಡರಿಗೆ ವಿಶ್ರಾಂತಿ ಬೇಡವೆ? ಎಂದು ಕೇಳಿದರೆ "ನನಗೆ ದೇವರು ಆರೋಗ್ಯ ನೀಡಿದ್ದಾದರೆ ನನ್ನ ಕಡೆಯ ಉಸಿರಿರುವವರೆಗೂ ಕೆರೆಗಳ ನಿರ್ಮಾಣದಲ್ಲೇ ಕಳೆಯುವೆ" ಎನ್ನುತ್ತಾರೆ.
ಕೆರೆಗಳ ನಿರ್ಮಾಣದ ಇವರ ಕಾಯಕವು ಇವರನ್ನು ತಮ್ಮ ಸಂಬಂಧಿಕರು, ಬಂಧು ಮಿತ್ರರಿಂದ ದೂರ ಮಾಡಿದೆ. ಆದರೆ ಕಾಮೇಗೌಡ ಮಾತ್ರ ಇದಾವುದಕ್ಕೂ ಕ್ಯಾರೇ ಎನ್ನಲಾರರು. "ನನಗೆ ಮರಗಿಡಗಳು, ಪಕ್ಷಿಗಳು, ಈ ಕೆರೆಗಳೇ ನೆಂಟರು. ಕೆಲವರು ನನ್ನನ್ನು ಹಾಸ್ಯ ಮಾಡ್ತಾರೆ, ಇನ್ನೂ ಕೆಲವರು ವಿರೋಧಿಸುತ್ತಾರೆ. ಸರ್ಕಾರಿ ಜಾಗ ಕಬಳಿಸ್ತಾನೆ ಎಂತಾರೆ. ಆದರೆ ನಾನು ಯಾವುದಕ್ಕೂ ಹೆದರಲ್ಲ, ನಾನು ಎಲ್ಲಿ ಕೆರೆ ನಿರ್ಮಾಣಕ್ಕಾಗಿ ಗುಂಡಿ ತೋಡುವೆನೋ ಅಲ್ಲೆಲ್ಲಾ ನೀರಿ ಸಿಗುವುದು ಖಚಿತ, ಅದು ಬೇಸಿಗೆಯಲ್ಲಿಸಹ ಬತ್ತುವುದಿಲ್ಲ. ಇದನ್ನು ಬೇಕಾದರೆ ನಾನು ಯಾರಿಗೇ ಆಗಲಿ ಸವಾಲು ಹಾಕುವೆ" ಅವರು ಹೇಳುತ್ತಾರೆ.
ಕಳೆದ ನಾಲ್ಕು ದಶಕಗಳಿಂದ ಮಂಡ್ಯ ಜಿಲ್ಲೆ ಮಳಾಳ್ಳಿಯ ದಾಸರದೊಡ್ಡಿ ಕಾಮೇಗೌಡರು ಸತತ ಪರಿಶ್ರಮದಿಂದ ಹದಿನಾಲ್ಕು ಕೆರೆಗಳನ್ನು ನಿರ್ಮಿಸಿ ಹಾಳು ಬೆಟ್ಟ,ವಾಗಿದ್ದ ಗ್ರಾಮವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ. ಶಾಲೆ ಮೆಟ್ಟಿಲು ತುಳಿಯದ ಇವರು ಇಂದು ಯಾರಿಗಾದರೂ ನೀರಿನ ಮಹತ್ವದ ಕುರಿತಂತೆ ಅರಿವು ಮೂಡಿಸಬಲ್ಲ ಜೀವಂತ ನಿದರ್ಶನವಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com