ಮೈಸೂರು: ಚಾಮರಾಜನಗರದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಶುಕ್ರವಾರ 16ಕ್ಕೆ ಏರಿಕೆಯಾಗಿದೆ.
ವಿಷ ಪ್ರಸಾದ ಸೇವಿಸಿ ಅಸ್ವಸ್ಥಗೊಂಡು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಾಗಿದ್ದ ಹನೂರು ಸಮೀಪದ ಮಾರ್ಟಳ್ಳಿ ನಿವಾಸಿ ನಾಗೇಶ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ನಾಗೇಶ್ ಅವರು ಕಳೆದ 8 ದಿನಗಳಿಂದ ವೆಂಟಿಲೇಟರ್ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ 8.45ರ ವೇಳೆಗೆ ಮೃತಪಟ್ಟಿದ್ದಾರೆಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾಹಿತಿ ನೀಡಿದ್ದಾರೆ.
ದುರಂತ ಸಂಭವಿಸಿದ ದಿನ ಮೇಕೆ ಮೇಯಿಸಲು ತೆರಳಿದ್ದ ನಾಗೇಶ್, ಮಾರ್ಗಮಧ್ಯೆ ದೇವಸ್ಥಾನಕ್ಕೆ ತೆರಳಿ ಪ್ರಸಾದ ಸೇವಿಸಿ, ಕಾಡಿಗೆ ಹೋಗಿದ್ದರು. ಪ್ರಸಾದ ಸೇವಿಸಿ ಕೆಲವರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡು ಫೋನ್ ಮಾಡಿ ಕರೆಸಿಕೊಂಡು ಬೈಕ್ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದರು.
ಮೃತನಿಗೆ ಪತ್ನಿ ಹಾಗೂ ನಾಲ್ಕು ಹೆಣ್ಣು ಮಕ್ಕಳು ಇದ್ದಾರೆ. ಜೆಎಸ್ಎಸ್ ಆಸ್ಪತ್ರೆಯಿಂದ ಕೆ.ಆರ್.ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ರವಾನಿಸಲಾಗಿದ್ದು, ಬಳಿಕ ಚಾಮರಾಜನಗರಕ್ಕೆ ರವಾನಿಸಲಾಗುತ್ತದೆ.