ಬೆಂಗಳೂರು: ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ(ಕೆಪಿಎಂಇ) ಕಾಯ್ದೆಗೆ ರಾಜ್ಯಪಾಲ ವಜುಭಾಯಿ ವಾಲ ಸಹಿ ಹಾಕಿದ್ದು ಇದೇ ಫೆಬ್ರವರಿಯಿಂದ ಕಾಯ್ದೆ ಜಾರಿಯಾಗುವ ನಿರೀಕ್ಷೆ ಇದೆ ಎಂದು ರಾಕ್ಯ ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.
"ನಿಯಮಗಳನ್ನು ರಚಿಸುವಾಗ ಆಕ್ಷೇಪಣೆಗಳ ಅವಕಾಶ ಸೇರಿದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಕೆಪಿಎಂಇ ಕಾಯಿದೆ ಸಾರ್ವಜನಿಕರಿಗೆ ಪ್ರಯೋಜನವಾಗಲಿದೆ ಹಾಗೆಯೇ ಖಾಸಗಿ ಆಸ್ಪತ್ರೆಗಳಿಗೂ ಖಾಸಗಿ ವೈದ್ಯರಿಗೂ ಸಹ ಇದರಿಂದ ಯಾವ ತೊಂದರೆಗಳಿರುವುದಿಲ್ಲ" ರಮೇಶ್ ಕುಮಾರ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾದ ನಂತರ ಇದನ್ನು ರಾಜ್ಯಪಾಲರ ಅನುಮೋದನೆಗಾಗಿ ಕಳಿಸಲಾಗಿತ್ತು. ಗುರುವಾರದಂದು ಸಚಿವ ರಮೇಶ್ ಕುಮಾರ್ ರಾಜ್ಯಪಾಲರೊಡನೆ ಸುಮಾರು ನಲವತ್ತು ನಿಮಿಷಗಳ ಕಾಲ ಚರ್ಚೆ ನಡೆಸಿದ ನಂತರ ಶುಕ್ರವಾರ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ರಾಜ್ಯಪಾಲರು ಅಂಕಿತ ಹಾಕಿರುವ ಕಾರಣ ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳ ವಿಧಿಸುವ ಚಿಕಿತ್ಸಾ ದರಕ್ಕೆ ಯಂತ್ರಣ ಹಾಕುವ ಜತೆಗೆ ಸಾರ್ವಜನಿಕ ಆರೋಗ್ಯ ಯೋಜನೆಗೆ ಕಾಯ್ದೆಯ ಬಲ ಸಿಕ್ಕಂತಾಗುತ್ತದೆ.