ಬೆಂಗಳೂರು: ಭೂಮಿಯ ಪಹಣಿ ಪತ್ರ ಇನ್ಮುಂದೆ ಆನ್ ಲೈನ್ ನಲ್ಲಿ ಲಭ್ಯ

ಕೃಷಿ ಭೂಮಿಯ ಪಹಣಿ(ಆರ್ ಟಿಸಿ) ಪಡೆಯುವುದು ಇನ್ನು ಸುಲಭ. ಕೇವಲ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕೃಷಿ ಭೂಮಿಯ ಪಹಣಿ(ಆರ್ ಟಿಸಿ) ಪಡೆಯುವುದು ಇನ್ನು ಸುಲಭ. ಕೇವಲ 10 ರೂಪಾಯಿಗೆ ನಿಮ್ಮ ಕೈ ಮುಂದೆಯೇ ಪಹಣಿ ಪತ್ರ ದೊರೆಯುತ್ತದೆ. ಸರ್ವೆ, ಸೆಟ್ಲ್ ಮೆಂಟ್ ಮತ್ತು ಭೂ ದಾಖಲೆಗಳ ಇಲಾಖೆ ವಿಶೇಷ ಸಾಫ್ಟ್ ವೇರ್ ವೊಂದನ್ನು ದೇಶದಲ್ಲಿಯೇ ಮೊದಲ ಬಾರಿಗೆ ಪರಿಚಯಿಸುತ್ತಿದ್ದು, ಇಲ್ಲಿ ಪಹಣಿ ವಿವರಗಳನ್ನು ನಿಮಿಷಗಳಲ್ಲಿ ಪಡೆಯಬಹುದು.
ಕೃಷಿ ಚಟುವಟಿಕೆಗಳಿಗೆ ಬ್ಯಾಂಕ್ ನಿಂದ ಸಾಲ ಪಡೆಯಲು, ಸಬ್ಸಿಡಿ ಬೀಜ ಖರೀದಿಸಲು ಮತ್ತು ಬೆಳೆ ವಿಮೆ ಇತ್ಯಾದಿಗಳಿಗೆ ರೈತರಿಗೆ ತಮ್ಮ ಜಮೀನಿನ ಪಹಣಿ ಅಥವಾ ದಾಖಲೆ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ. ಪಹಣಿಯಲ್ಲಿ ಭೂಮಿಯ ಸರ್ವೆ ಸಂಖ್ಯೆ, ಭೂಮಿಯ ವಿಧಾನ, ನೀರಿನ ಮೂಲ, ಮಾಲಿಕರ ಭಾಗದ ಜಮೀನು ಮತ್ತು ಇತರ ವಿವರಗಳನ್ನು ಹೊಂದಿರುತ್ತದೆ. ಆಯಾ ತಾಲ್ಲೂಕಿನ ತಹಸಿಲ್ದಾರರ ಸಹಿಯನ್ನು ಪಹಣಿ ಪತ್ರದಲ್ಲಿ ಇರುತ್ತದೆ.
ಸರ್ವೆ, ಸೆಟ್ಲ್ ಮೆಂಟ್ ಮತ್ತು ಭೂ ದಾಖಲೆಗಳ ಇಲಾಖೆಯ ಆಯುಕ್ತ ಮುನೀಶ್ ಮೌದ್ಗಿಲ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿ, ಕಂದಾಯ ಇಲಾಖೆಯ ಭೂಮಿ ಪೋರ್ಟಲ್ ನ್ನು ಬಳಸಿಕೊಂಡು ಭೂಮಿ ಮಾಲಿಕರು ತಮ್ಮ ಜಮೀನಿನ ಸರ್ವೆ ಸಂಖ್ಯೆ, ಗ್ರಾಮ, ತಾಲ್ಲೂಕು ಮತ್ತು ಜಿಲ್ಲೆಯ ವಿವರಗಳನ್ನು ನೀಡಬಹುದು. ಭಾರತದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಭೂಮಿ ಮಾಲಿಕರ ಪಹಣಿ ಅಥವಾ ಆರ್ ಟಿಸಿ ಸಿಗುತ್ತಿರುವುದು ಎಂದು ಮೌದ್ಗಿಲ್ ಹೇಳಿದರು.
ಇದುವರೆಗೆ ರೈತರಿಗೆ ತಮ್ಮ ಭೂಮಿಯ ಪಹಣಿ ಪಡೆಯಲು ದಿನವಿಡೀ ಕಾದು ನಿಲ್ಲಬೇಕಾಗುತ್ತಿತ್ತು. ತಾಲ್ಲೂಕು ಕಚೇರಿಗೆ ಹೋಗಿ ಸರದಿ ಸಾಲಿನಲ್ಲಿ ನಿಲ್ಲಬೇಕು. ಅಲ್ಲಿ ಮಧ್ಯವರ್ತಿಗಳಿಗೆ ಲಂಚ ನೀಡುವ ಕಾಟಗಳು ಇರುತ್ತವೆ. ಇದೀಗ ಎಲ್ಲವೂ ರೈತರ ಕೈಯಲ್ಲಿಯೇ ನಿಯಂತ್ರಣದಲ್ಲಿರುತ್ತದೆ. ತನ್ನ ಮನೆಯಲ್ಲಿಯೇ ಕುಳಿತು ಕಂಪ್ಯೂಟರ್ , ಇಂಟರ್ನೆಟ್ ಇದ್ದರೆ ನೋಡಬಹುದು. ಇಲ್ಲವೇ ಮನೆಯ ಹತ್ತಿರದಲ್ಲಿ ಇಂಟರ್ನೆಟ್ ಕೆಫೆಗೆ ಹೋಗಿ ಅಥವಾ ಗ್ರಾಮ ಪಂಚಾಯತ್ ನಲ್ಲಿ 10 ರೂಪಾಯಿ ಕೊಟ್ಟು ನೀಡಬಹುದು.
ಸರ್ಕಾರ ಆರಂಭಿಸಿರುವ ಈ ಸೌಲಭ್ಯಕ್ಕೆ ರೈತರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕೇವಲ ಐದೇ ದಿನಗಳಲ್ಲಿ ಕನಿಷ್ಠ 6,000 ಜನರು ಪಹಣಿ ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂದು ಮೌದ್ಗಿಲ್ ಹೇಳಿದರು.
ಪಹಣಿ ಪಡೆಯುವುದು ಹೇಗೆ: http://landrecords.karnataka.gov.in/rtconline/ ವೆಬ್ ಸೈಟ್ ಗೆ ಭೇಟಿ ನೀಡಬೇಕು. ಅಲ್ಲಿ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿದ ನಂತರ ಪಹಣಿ ದಾಖಲೆಗಳನ್ನು ಪಡೆಯಬಹುದು. ಅಲ್ಲಿ ಹಣ ಪಾವತಿಯ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದು. ಖಾಲಿ ಹಾಳೆಯಲ್ಲಿ ಮುದ್ರಣ ಪಡೆದುಕೊಳ್ಳಬಹುದು. ಅದು ಮೂಲ ದಾಖಲೆ ಎಂದು ಪರಿಗಣಿಸಬಹುದು.
ಆಧಾರ್ ಕಡ್ಡಾಯವಲ್ಲ: ಸರ್ವೆ ಇಲಾಖೆ ಪಹಣಿಯನ್ನು ಆಧಾರ್ ಜೊತೆಗೆ ಸಂಪರ್ಕಿಸಲು ಪ್ರಯತ್ನಿಸುತ್ತಿದೆ. ಆದರೆ ರಾಜ್ಯ ಸರ್ಕಾರ ಆಧಾರ್ ಜೋಡಣೆ ಕಡ್ಡಾಯ ಮಾಡಿಲ್ಲ. ಆದರೂ ನಾವು ಆಧಾರ್ ನ್ನು ಭೂ ದಾಖಲೆ ಜೊತೆ ಜೋಡಣೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಮೌದ್ಗಿಲ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com