ಬೆಂಗಳೂರು: ಅಕ್ರಮ ಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆಯ ಸುಮಾರು 29 ಸಾವಿರ ಪ್ರಕರಣಗಳ ಬಗ್ಗೆ ಗಂಭೀರವಾಗಿ ತೆಗೆದುಕೊಂಡಿರುವ ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ್ ಶೆಟ್ಟಿ, ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಿ ಪರಿಸರ ಅಸಮತೋಲನವನ್ನು ತಡೆಯಲು ಹೆಚ್ಚು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ಇಂತಹ ಪ್ರಕರಣಗಳನ್ನು ತಡೆಯಲು ಹೆಚ್ಚೆಚ್ಚು ದಂಡಗಳನ್ನು ವಿಧಿಸಬೇಕಾಗಿದೆ ಎಂದಿದ್ದಾರೆ. ನಿಯಮ ಉಲ್ಲಂಘಿಸಿದ್ದಕ್ಕಾಗಿ ಸಂಗ್ರಹಿಸಿರುವ ದಂಡ ಮೊತ್ತ 110 ಕೋಟಿ ರೂಪಾಯಿಗಳಾಗಿದೆ.
ಗಣಿಗಾರಿಕೆ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರು ಸಲ್ಲಿಸಿದ ವರದಿಗಳಿಗೆ ಅನುಗುಣವಾಗಿ ಲೋಕಾಯುಕ್ತರು ಈ ಆದೇಶ ನೀಡಿದ್ದಾರೆ. ಅಕ್ರಮ ಗಣಿಗಾರಿಕೆ ಸಂಬಂಧ ಇಲಾಖೆ 8,224 ಪ್ರಕರಣಗಳನ್ನು ಪತ್ತೆಹಚ್ಚಿ 64.78 ಕೋಟಿ ರೂಪಾಯಿಗಳನ್ನು 2015-16 ಮತ್ತು 2017-18ರಲ್ಲಿ ಸಂಗ್ರಹಿಸಿದೆ. ಅದೇ ರೀತಿ, ಇಲಾಖೆ ಅಕ್ರಮ ಮರಳುಗಾರಿಕೆಯಡಿ 20,588 ಕೇಸುಗಳನ್ನು ಪತ್ತೆಹಚ್ಚಿ 44.97 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಈ ಎಲ್ಲಾ ಕೇಸುಗಳಲ್ಲಿ ಕ್ರಿಮಿನಲ್ ವಿಚಾರಣೆಗಳನ್ನು ನಡೆಸಲಾಗಿದೆ ಎಂದರು.
ಲೋಕಾಯುಕ್ತ ನ್ಯಾಯಮೂರ್ತಿಗಳು ಇತ್ತೀಚೆಗೆ ನೀಡಿದ್ದ ಆದೇಶದಲ್ಲಿ ಗ್ರಾನೈಟ್ ಗಳ ಅಕ್ರಮ ಗಣಿಗಾರಿಕೆ, ಮರಳನ್ನು ಯಥೇಚ್ಛವಾಗಿ ತೆಗೆಯುವುದು ಮತ್ತು ಅದರ ಸಾಗಾಟ ಮಾಡುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರಿಂದ ಈ ಕುರಿತು ಬರುತ್ತಿರುವ ದೂರುಗಳು ಮತ್ತು ಪರಿಸ್ಥಿತಿಯನ್ನು ನೋಡಿಕೊಂಡು ಅಗತ್ಯ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಕ್ರಮ ಮರಳುಗಾರಿಕೆ ಮತ್ತು ಗಣಿಗಾರಿಕೆಯಿಂದ ರಾಜ್ಯದ ನೈಸರ್ಗಿಕ ಸಂಪನ್ಮೂಲ ಬರಿದಾಗುತ್ತದೆ, ಅಲ್ಲದೆ ಪರಿಸರ ಅಸಮತೋಲನ ಉಂಟಾಗುತ್ತದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬ ನಂಬಿಕೆಯಿದೆ. ವಾಹನಗಳಲ್ಲಿ ಅಗತ್ಯಕ್ಕಿಂತ ಅಧಿಕ ಮರಳು ಮತ್ತು ಗಣಿಗಳನ್ನು ಸಾಗಿಸುವುದನ್ನು ಕೂಡ ಸಮಿತಿ ತಪಾಸಣೆ ನಡೆಸಲಿದೆ. ಏಕೆಂದರೆ ಭಾರೀ ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದರೆ ರಸ್ತೆಯ ಗುಣಮಟ್ಟ ಕೂಡ ಹಾಳಾಗುತ್ತದೆ ಎಂದು ಲೋಕಾಯುಕ್ತರು ಹೇಳುತ್ತಾರೆ.
ಕಳೆದ ತಿಂಗಳು 13ರಂದು ಗಣಿ ಮತ್ತು ಭೂ ವಿಜ್ಞಾನ ನಿರ್ದೇಶಕ ಎನ್ ಎಸ್ ಪ್ರಸನ್ನ ಕುಮಾರ್ ಅವರು ಲೋಕಾಯುಕ್ತರಿಗೆ ಸಲ್ಲಿಸಿದ ವರದಿಯಲ್ಲಿ ಕಳೆದ ಮೂರು ತಿಂಗಳಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿನ ಆದಾ. ಸುಮಾರು 1 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ ಎಂದಿದ್ದಾರೆ.
Advertisement