ಮಣಿಪಾಲ: ಚಾಕು ಮತ್ತು ಮಾರಕಾಸ್ತ್ರಗಳಿಂದ ಇರಿದು ಉದ್ಯಮಿಯೊಬ್ಬರನ್ನು ಹಾಡಹಗಲೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆ ಮಣಿಪಾಲದ ಪೆರಂಪಳ್ಳಿ ರಸ್ತೆಯಲ್ಲಿ ಗುರುಪ್ರಸಾದ್ ಭಟ್(46) ಎನ್ನುವವರ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.
ಮೃತರು ಉಡುಪಿಯ ಪುತ್ತೂರು ಗ್ರಾಮದ ನಿವಾಸಿಯಾಗಿದ್ದು ಉಡುಪಿಯಲ್ಲಿ ಪಬ್ ನಡೆಸುತ್ತಿದ್ದರು. ಶಾಸಕ ರಘುಪತಿ ಭಟ್ ಅವರ ಸಂಬಂಧಿ ಎನ್ನಲಾಗಿರುವ ಇವರು ಕೆಲ ವರ್ಷದ ಹಿಂದೆ "ಸತ್ಯ ನ್ಯೂಸ್" ಎನ್ನುವ ವಾರ ಪತ್ರಿಕೆಯನ್ನು ನಡೆಸುತ್ತಿದ್ದರು.
ಭಾನುವಾರ ಪೆರಂಪಳ್ಳಿ ಕ್ಲಬ್ ನಲ್ಲಿ ಇದ್ದ ಸಮಯ ನಾಲ್ವರು ದುಷ್ಕರ್ಮಿಗಳ ತಂಡ ಕ್ಲಬ್ ಗೆ ನುಗ್ಗಿ ಈ ಕೃತ್ಯ ನಡೆಸಿದೆ.
ಹಳೆಯ ದ್ವೇಷವೇ ಕೊಲೆಗೆ ಕಾರಣವಿರಬಹುದು ಎನ್ನಲಾಗಿದ್ದು ಮಣಿಪಾಲ ಪೋಲೀಸರು ತನಿಖೆ ಕೈಗೊಂಡಿದ್ದಾರೆ.