ಉಡುಪಿ: ಹಸುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೃದ್ಧರ ಶಂಕಾಸ್ಪದ ಸಾವಿನ ಹಿನ್ನೆಲೆಯಲ್ಲಿ ಉಡುಪಿಯ ಹಿರಿಯಡ್ಕ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನ್ನು ಸೇವೆಯಿಂದ ವಜಾ ಮಾಡಲಾಗಿದೆ.
ಮಂಗಳೂರಿನ ಜೋಗಟ್ಟೆಯ ಹಸಿನಬ್ಬ ಸಾವಿನ ಹಿನ್ನೆಲೆಯಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಡಿ.ಎನ್.ಕುಮಾರ್ ಅವರನ್ನು ವಜಾಗೊಳಿಸಲಾಗಿದೆ. ಹಸನಬ್ಬನ ಶವ ಪೆರ್ಡೂರು ಸಮೀಪ ಕಳೆದ ಗುರುವಾರ ಸಿಕ್ಕಿತ್ತು. ಇದೊಂದು ಕೊಲೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದರು.
ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಕುಮಾರ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಈ ಕೇಸಿಗೆ ಸಂಬಂಧಪಟ್ಟಂತೆ ಇನ್ನಷ್ಟು ಪೊಲೀಸ್ ಸಿಬ್ಬಂದಿ ಸೇವೆಯಿಂದ ವಜಾಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಬುಧವಾರ ನಸುಕಿನ ಜಾವ ಹಸನಬ್ಬ ಮೂವರು ಸಹಚರರೊಂದಿಗೆ ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಹಿಡಿದಿದ್ದಾರೆ. ಉಳಿದ ಮೂವರು ತಪ್ಪಿಸಿಕೊಂಡರೆ ಹಸನಬ್ಬ ಮರುದಿನ ಶವವಾಗಿ ಪತ್ತೆಯಾಗಿದ್ದರು. ಪೊಲೀಸರಿಗೆ ಬುಧವಾರ ನಸುಕಿನ ಜಾವ ಹಸುಗಳ ಕಳ್ಳಸಾಗಣೆ ಬಗ್ಗೆ ಮಾಹಿತಿ ಸಿಕ್ಕಿ ಸ್ಥಳಕ್ಕೆ ಧಾವಿಸಿದ್ದರು. ಹಸನಬ್ಬ ಸಾವಿಗೆ ಸರಿಯಾದ ಕಾರಣ ತಿಳಿದುಬಂದಿಲ್ಲ.
ಅದೇ ದಿನ ಬೆಳಗ್ಗೆ ಹಸನಬ್ಬನ ಕುಟುಂಬಸ್ಥರಿಗೆ ಆತನ ಶವ ಪೆರ್ಡೂರ್ ಸಮೀಪ ಸಿಕ್ಕಿದೆ ಎಂದು ಹೇಳಿ ದೂರವಾಣಿ ಕರೆ ಬಂದಿತ್ತು. ಪೊಲೀಸರು ಸ್ಥಳೀಯ ಭಜರಂಗ ಕಾರ್ಯಕರ್ತರ ಜೊತೆ ನಂಟು ಹೊಂದಿದ್ದಾರೆ ಎಂದು ಸ್ಥಳೀಯ ನಾಗರಿಕರು ಆರೋಪಿಸಿದ್ದಾರೆ.
Advertisement