ಉಡುಪಿ: ಕಳೆದ ಬಾರಿ ಉಡುಪಿಯ ಶ್ರೀಕೃಷ್ಣ ಮಠದ ಆವರಣದಲ್ಲಿ ಮುಸಲ್ಮಾನರಿಗೆ ಇಫ್ತಾರ್ ಕೂಟ ಆಯೋಜಿಸಿ ವಿವಾದಕ್ಕೀಡಾಗಿದ್ದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮಿಗಳು ಈ ಬಾರಿ ಕೂಡ ಇಫ್ತಾರ್ ಕೂಟ ಆಯೋಜನೆಯಿಂದ ಹಿಂದೆ ಸರಿದಿಲ್ಲ.
ಈ ಬಾರಿ ಮಾತ್ರ ಪೇಜಾವರ ಶ್ರೀಗಳು ಶ್ರೀಕೃಷ್ಣ ಮಠದ ಆವರಣದಲ್ಲಿನ ಸಭಾಂಗಣದಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡಿಲ್ಲ, ಬೇರೆ ಸ್ಥಳ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಮಠದ ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿವೆ.
ಆದರೆ ಹಿಂದೂ ಮಠದ ಸ್ವಾಮೀಜಿಯೊಬ್ಬರು ಈ ರೀತಿ ಮುಸಲ್ಮಾನರಿಗೆ ಇಫ್ತಾರ್ ಕೂಟ ಆಯೋಜಿಸುವುದರಿಂದ ಸಮಾಜದ ಬಲಪಂಥೀಯ ಹಿಂದೂ ಧರ್ಮದವರ ಕೆಂಗಣ್ಣಿಗೆ ಗುರಿಯಾದಂತಾಗುತ್ತದೆ ಇದು ಅವರ ವ್ಯಕ್ತಿತ್ವಕ್ಕೆ ಧಕ್ಕೆ ಎಂದು ಕೆಲವು ಮುಸಲ್ಮಾನ ಸಮುದಾಯದವರೇ ಹೇಳುತ್ತಾರೆ.
ಸಮಾಜದಲ್ಲಿ ಕೋಮು ಸೌಹಾರ್ದತೆ ಮತ್ತು ಸೌಹಾರ್ದಯುತ ಸಂಬಂಧ ಕಲ್ಪಿಸುವ ನಿಟ್ಟಿನಲ್ಲಿ ಪೇಜಾವರ ಶ್ರೀಗಳು ಇಫ್ತಾರ್ ಕೂಟ ಆಯೋಜಿಸಿದ್ದಾರೆ. ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಪೇಜಾವರ ಶ್ರೀಗಳ ಅಭಿಮಾನಿ ಹಾಗೂ ಪೇಜಾವರ ರಕ್ತ ದಾನ ತಂಡದ ಪ್ರಧಾನ ಕಾರ್ಯದರ್ಶಿ ಅನ್ಸರ್ ಅಹ್ಮದ್, ಕಳೆದ ಗುರುವಾರ ತಾವು ಮತ್ತು ತಮ್ಮ ತಂಡದವರು ಪೇಜಾವರ ಶ್ರೀಗಳನ್ನು ಭೇಟಿ ಮಾಡಿದೆವು. ಅಲ್ಲಿ ಇಫ್ತಾರ್ ಕೂಟ ಆಯೋಜನೆ ಕುರಿತು ಮಾತುಕತೆ ನಡೆಯಿತು ಎಂದು ತಿಳಿಸಿದ್ದಾರೆ.
ಅಜ್ಜರಕಾಡು ಸಮೀಪದ ಗೋವಿಂದ ಕಲ್ಯಾಣ ಮಂಟಪದಲ್ಲಿ ಈ ಬಾರಿ ಇಫ್ತಾರ್ ಕೂಟ ಆಯೋಜಿಸಿರುವುದರಿಂದ ಯಾವುದೇ ಗಲಾಟೆ, ವಿರೋಧ ಆಗಲಿಕ್ಕಿಲ್ಲ ಎಂದು ಭಾವಿಸಿದ್ದೇವೆ. ಅಲ್ಲಿ ಆಯೋಜಿಸಿದರೆ ಹಿಂದೂ ಅಥವಾ ಮುಸಲ್ಮಾನ ಬಾಂಧವರ ಮನಸ್ಸಿಗೆ ನೋವುಂಟಾಗುವುದಿಲ್ಲ. ಇಲ್ಲಿ ಹಿಂದೂ ಮುಸಲ್ಮಾನರು ಬಾಂಧವ್ಯದಿಂದ ನೆಲೆಸಿದ್ದಾರೆ.
ಗೋವಿಂದ ಕಲ್ಯಾಣ ಮಂಟಪ ಪೇಜಾವರ ಮಠದ ಆಸ್ತಿಯಾಗಿದೆ ಎಂದು ಅವರು ಹೇಳಿದರು.
Advertisement