ಮೈಸೂರು: ಕಳೆದ 2ನೇ ತಾರೀಕಿನಂದು ತಮ್ಮ 40ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಸೋಮಶೇಖರ್ ಖುಷಿಯಲ್ಲಿ ಸ್ನೇಹಿತರೊಂದಿಗೆ ಕೆ ಆರ್ ತಾಲ್ಲೂಕಿನ ಚುಂಚನಕಟ್ಟೆ ಜಲಪಾತಕ್ಕೆ ತೆರಳಿದ್ದರು.
ಜಲಪಾತದ ನೀರಿಗಿಳಿದು ಆಟವಾಡುತ್ತಿರುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಇವರ ಮೃತದೇಹ ನಿನ್ನೆ ಸಿಕ್ಕಿದೆ. ಇವರು ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಜೀವ ರಸಾಯನಶಾಸ್ತ್ರ ವಿಭಾಗದ (ಸಿಎಫ್ ಟಿಆರ್ ಐ) ಫೆಲೊ ಆಗಿದ್ದಾರೆ.
ಸೋಮಶೇಖರ್ ಅವರ ಪತ್ನಿ ಪ್ರತಿಮಾ ಮತ್ತು ಇಶಾನಿ ಹಾಗೂ ಅವರ ಕುಟುಂಬ ಸ್ನೇಹಿತ ವಿನಯ್ ಮತ್ತವರ ಮಗಳನ್ನು ಸ್ಥಳೀಯರು ನೀರಿನಲ್ಲಿ ಕೊಚ್ಚಿ ಹೋಗುವುದರಿಂದ ಕಾಪಾಡಿದ್ದು ಸೋಮಶೇಖರ್ ಅವರನ್ನು ಕಾಪಾಡುವ ಪ್ರಯತ್ನ ಮಾತ್ರ ವಿಫಲವಾಯಿತು.
ಜಲಪಾತದಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಈ ದುರಂತ ಸಂಭವಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚಿಕ್ಕಮಾರನಹಳ್ಳಿಯ ನೆಲಮಂಗಲ ಸಮೀಪದವರಾದ ಸೋಮಶೇಖರ್ ಕೆಲಸಕ್ಕೆ ಸೇರಿದ ಎರಡೇ ವರ್ಷಗಳಲ್ಲಿ ಹೆಚ್ಚು ಖ್ಯಾತಿ ಗಳಿಸಿದ್ದರು ಎಂದು ಸಿಎಫ್ ಟಿಆರ್ ಐ ವಿಭಾಗದ ಮುಖ್ಯ ವಿಜ್ಞಾನಿ ಸುಬ್ರಹ್ಮಣ್ಯನ್ ಹೇಳಿದ್ದಾರೆ.
Advertisement