ವಿಜಯಪುರ: ಮಾಧ್ಯಮಗಳಲ್ಲಿ ವೈರಲ್ ಆಗಿರುವ ಮುಸಲ್ಮಾನರ ಬಗ್ಗೆ ನೀಡಿದ್ದ ಹೇಳಿಕೆಯನ್ನು ಮಾಜಿ ಕೇಂದ್ರ ಸಚಿವ ಮತ್ತು ಬಿಜಾಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಎಸ್ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿಗೆ ಮತ ಹಾಕದ್ದರಿಂದ ಮುಸಲ್ಮಾನ ಸಮುದಾಯಗಳ ಅಭಿವೃದ್ಧಿಗೆ ಕೆಲಸ ಮಾಡಬೇಡಿ ಎಂದು ಬಿಜೆಪಿ ಕಾರ್ಪೊರೇಟರ್ ಗಳನ್ನುದ್ದೇಶಿಸಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿರುವುದು ವೈರಲ್ ಆಗಿತ್ತು.
ಈ ಬಗ್ಗೆ ನಿನ್ನೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ಹೇಳಿಕೆಗೆ ಬದ್ಧವಾಗಿದ್ದು ಕಳೆದ ವಿಧಾನಸಭೆ ಚುನಾವಣೆ ಹಿಂದೂಗಳು ಮತ್ತು ಮುಸಲ್ಮಾನರ ನಡುವಿನ ಯುದ್ಧವಾಗಿತ್ತು. ನಾನು ನೀಡಿರುವ ಹೇಳಿಕೆಯನ್ನು ಪತ್ರಕರ್ತರೊಬ್ಬರು ಪಕ್ಷಪಾತವಾಗಿ ಸುದ್ದಿ ಮಾಡಿದ್ದಾರೆ. ಅಬ್ದುಲ್ ಒವೈಸಿಯಂತಹ ಮುಸ್ಲಿಂ ನಾಯಕರೊಬ್ಬರು ಹಿಂದೂಗಳ ಬಗ್ಗೆ ಹೇಳಿಕೆ ನೀಡಿದರೆ ನೀವು ಅವರನ್ನು ಪ್ರಶ್ನೆ ಮಾಡುವುದಿಲ್ಲ, ಹಿಂದೂಗಳನ್ನು ಮಾತ್ರ ಪ್ರಶ್ನೆ ಮಾಡುತ್ತೀರಿ. ಮಾಧ್ಯಮಗಳು ಪಕ್ಷಪಾತೀಯ ಧೋರಣೆ ಅನುಸರಿಸುತ್ತಿವೆ ಎಂದು ಆರೋಪಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಕಾರ್ಪೊರೇಟರ್ ಗಳನ್ನು ಉದ್ದೇಶಿಸಿ ಮಾತನಾಡುತ್ತಾ, ನಾನು ಮುಸ್ಲಿಂಮರಿಗೆ ವೋಟ್ ಹಾಕಿ ಎಂದು ಕೇಳುವುದಿಲ್ಲ, ಹಿಂದೂಗಳಿಗೆ ನನ್ನ ಮೇಲೆ ನಂಬಿಕೆ, ಪ್ರೀತಿಯಿದೆ. ಅವರಿಗೆ ನಾನು ಚುನಾವಣೆಯಲ್ಲಿ ಗೆಲ್ಲಬೇಕು. ಹಿಂದೂ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತೇನೆಯೇ ಹೊರತು, ಮುಸ್ಲಿಂಮರಿಗೆ ಅಲ್ಲ. ಬುರ್ಖಾ ಧರಿಸಿದ ಮಹಿಳೆಯರು, ಗಡ್ಡ ಬಿಟ್ಟ ಪುರುಷರು ಮತ್ತು ತಲೆಗೆ ಟೊಪ್ಪಿ ಹಾಕಿದವರನ್ನು ನನ್ನ ಕಚೇರಿ ಹತ್ತಿರ ಬರಲು ಬಿಡಬೇಡಿ ಎಂದು ಹೇಳಿದ್ದರು. ಆ ವಿಡಿಯೊ ಸಖತ್ ವೈರಲ್ ಆಗಿದೆ.
Advertisement