ಹೊಸದುರ್ಗ: ಕಾರೊಂದು ಮರಕ್ಕೆ ಡಿಕ್ಕಿಯಾಗಿ ತಂದೆ, ಮಗಳು ಸಾವನ್ನಪ್ಪಿರುವ ದುರಂತ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿ ನಡೆದಿದೆ.
ಹೊಸದುರ್ಗದ ಎನ್.ಜಿ. ಹಳ್ಳಿ ಗೇಟ್ ಬಳಿ ಸಂಭವಿಸಿದ ದುರಂತದಲ್ಲಿ ಜವಳಿ ಉದ್ಯಮಿ ಮಂಜುನಾಥ್ (40) ಮತ್ತು ಅವರ ಒಂದು ವರ್ಷದ ಮಗಳು ರಾಜೇಶ್ವರಿ ಮೃತಪಟ್ಟಿದ್ದಾರೆ. ಮಂಜುನಾಥ್ ಸೋಮವಾರ ಬೆಳಗಿನ ಜಾವ ದಾವಣಗೆರೆಯಿಂದ ಹೊಸದುರ್ಗಕ್ಕೆ ಕುಟುಂಬದೊಡನೆ ತೆರಳುತ್ತಿದ್ದರು.
ಘಟನೆ ವೇಳೆ ಕಾರಿನಲ್ಲಿದ್ದ ಮಂಜುನಾಥ್ ಅವರ ಪತ್ನಿ ಶಿಲ್ಪಾ, ಮಗಳು ಶಾರದಾ, ಸನ್ವಿತಾ ಹಾಗೂ ಆಕೆಯ ಸ್ನೇಹಿತ ರಂಗನಾಥ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಚಾಲನೆ ಮಾಡುತ್ತಿದ್ದ ಮಂಜುನಾಥ್ ನಿಯಂತ್ರಣ ತಪ್ಪಿ ಕಾರು ರಸ್ತೆ ಪಕ್ಕದ ಮರಕ್ಕೆ ಡಿಕ್ಕಿಯಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.