ಮಂಗಳೂರು: ವಿದ್ಯಾರ್ಥಿಗಳಿಲ್ಲದೇ ರಾಜ್ಯದಲ್ಲಿ ಹಲವು ಸರ್ಕಾರಿ ಶಾಲೆಗಳು ಸಮಸ್ಯೆಯಲ್ಲಿವೆ, ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿರುವ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ಕ್ಯೂನಲ್ಲಿ ನಿಂತಿರುತ್ತಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 1ರಿಂದ 9ನೇ ತರಗತಿಗೆ 203 ವಿದ್ಯಾರ್ಥಿಗಳು ಹೊಸದಾಗಿ ಪ್ರವೇಶ ಪಡೆದಿದ್ದಾರೆ. ಸರ್ಕಾರಿ ಮಾದರಿ ಪ್ರೌಢಶಾಲೆಯಲ್ಲಿ 736 ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಕಳೆದ ವರ್ಷ 534 ವಿದ್ಯಾರ್ಥಿಗಳಿದ್ದರು. ಕಳೆದ ವರ್ಷ ಆರಂಭಗೊಂಡ ನರ್ಸರಿ ಶಾಲೆಯಲ್ಲಿ 86 ಇದ್ದ ವಿದ್ಯಾರ್ಥಿಗಳ ಸಂಖ್ಯೆ ಈ ವರ್ಷ 203ಕ್ಕೇರಿದೆ.
ಇದಕ್ಕಿಂತ ದೊಡ್ಡ ಆಶ್ಚರ್ಯದ ಸಂಗತಿಯೆಂದರೆ, ಈ ಸರ್ಕಾರಿ ಶಾಲೆ ಹಲವು ಖಾಸಗಿ ಶಾಲೆಗಳಿಗೆ ದೇಣಿಗೆ ನೀಡುತ್ತಿದೆ. ಈ ವರ್ಷ 4 ಖಾಸಗಿ ಶಾಲೆಗಳಿಂದ 25 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ದಾಖಲಾಗಿದ್ದಾರೆ, ಇದೊಂದು ಅಪರೂಪ ಎನ್ನುವಂತಾಗಿದೆ. ದಾಖಲಾತಿ ಸಮಯದಲ್ಲಿ ಅಪಾರ ಪ್ರಮಾಣದಲ್ಲಿ ಮಕ್ಕಳು ಹಾಗೂ ಪೋಷಕರು ಹಲವು ಗ್ರಾಮಗಳಿಂದ ಬರುತ್ತಾರೆ, ಮುಖ್ಯೋಪಾಧ್ಯಾಯರು ಅವರನ್ನೆಲ್ಲಾ ಮನವೊಲಿಸಿ ಅವರ ಊರಿನ ಪಕ್ಕದಲ್ಲಿರುವ ಶಾಲೆಗೆ ಸೇರುವಂತೆ ಹೇಳಿ ಕಳುಹಿಸುತ್ತಾರೆ.
ಮೂಲಭೂತ ಸೌಕರ್ಯ ಹಾಗೂ ಭೋದನೆಯ ಗುಣಮಟ್ಟ ಉತ್ತಮಪಡಿಸಲಾಗಿದೆ, ಆರು ತಿಂಗಳ ಹಿಂದೆ ಅಜಿತ್ ಕುಮಾರ್ ರೈ ಎಂಬ ಉದ್ಯಮಿ ಮೂರು ಮಹಡಿಯ ಕಟ್ಟಡ ಕಟ್ಟಲು 1.25 ಕೋಟಿ ರೂ ಹಣ ದೇಣಿಗೆ ನೀಡಿದ್ದಾರೆ. ಇವರ ಜೊತೆಗೆ ಹಲವು ಮಂದಿ ತಮ್ಮ ಕೊಡುಗೆ ನೀಡಿದ್ದಾರೆ.
ಇದರ ಪರಿಣಾಮವಾಗಿ ಖಾಸಗಿ ಶಾಲೆಯಲ್ಲಿರುವ ಸೌಕರ್ಯಗಳಂತೆ ಸರ್ಕಾರಿ ಶಾಲೆಯೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದೆ. ಕಂಪ್ಯೂಟರ್, ಪ್ರಯೋಗಾಲಯ, ಗ್ರಂಥಾಲಯ ಮತ್ತು ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಮತ್ತು ಪಠ್ಯೇತರ ಚಟುವಟಿಕೆಗಳಾದ ಕರಾಟೆ, ಭರತನಾಟ್ಯ, ಸಂಗೀತ ಕಲಿಸಿಕೊಡಲಾಗುತ್ತದೆ.
ಪ್ರತಿದಿನ ವಿದ್ಯಾರ್ಥಿಗಳಿಗೆ ಶ್ರೀ ಸತ್ಯಸಾಯಿ ಅನ್ನಪೂರ್ಣ ಸೇವಾ ಟ್ರಸ್ಟ್ ಉಪಾಹಾರ ನೀಡುತ್ತದೆ. ಹಳೆಯ ವಿದ್ಯಾರ್ಥಿಗಳು ಸಮಿತಿಯೊಂದನ್ನು ರಚಿಸಿ 11 ಮಂದಿ ಶಿಕ್ಷಕರು ಹಾಗೂ ಮೂವರು ಸಹಾಯಕರನ್ನು ನೇಮಿಸಿಕೊಂಡು ಅವರಿಗೆ ವೇತನ ಪಾವತಿಸಲಾಗುತ್ತದೆ. ಮುಖ್ಯೋಪಾಧ್ಯಾಯರಾದ ವಿಶ್ವನಾಥ ಗೌಡ ಈ ವರ್ಷ 1 ನೇ ತರಗತಿಗೆ 125 ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಿದ್ದಾರೆ.