ಸಿಂಡಿಕೇಟ್ ಬ್ಯಾಂಕ್ ಗೆ ವಂಚನೆ ಆರೋಪ: ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ದೂರು ದಾಖಲು

ಕಡಿಮೆ ಮೌಲ್ಯದ ಆಸ್ತಿಯನ್ನು ಅಡ ಇರಿಸಿ ರಾಷ್ಟ್ರೀಕೃತ ಬ್ಯಾಂಕ್‌ ಒಂದರಿಂದ ಭಾರಿ ಮೊತ್ತದ ಸಾಲ ಪಡೆದಿರುವ ಆರೋಪ ಕರ್ನಾಟಕದ ಬಂದರು ಮತ್ತು ಒಳನಾಡು ...
ಪ್ರಮೋದ್ ಮಧ್ವರಾಜ್
ಪ್ರಮೋದ್ ಮಧ್ವರಾಜ್
ಬೆಂಗಳೂರು: ಕಡಿಮೆ ಮೌಲ್ಯದ ಆಸ್ತಿಯನ್ನು ಅಡ ಇರಿಸಿ ರಾಷ್ಟ್ರೀಕೃತ ಬ್ಯಾಂಕ್‌ ಒಂದರಿಂದ ಭಾರಿ ಮೊತ್ತದ ಸಾಲ ಪಡೆದಿರುವ ಆರೋಪ ಕರ್ನಾಟಕದ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಪ್ರಮೋದ್‌ ಮಧ್ವರಾಜ್‌ ವಿರುದ್ಧ ಕೇಳಿಬಂದಿದೆ.
ಸಿಂಡಿಕೇಟ್‌ ಬ್ಯಾಂಕ್‌ನ ಉಡುಪಿ ಜಿಲ್ಲೆಯ ಮಲ್ಪೆ ಶಾಖೆಯಿಂದ 193 ಕೋಟಿ  ರು. ಸಾಲ ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಕೇವಲ  1.10 ಕೋಟಿ  ರು. ಮೌಲ್ಯದ ಜಮೀನನ್ನು ಅಡ ಇರಿಸಿರುವ ಸಚಿವರಿಗೆ 193 ಕೋಟಿ  ರು. ಸಾಲ  ನೀಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾ ಆರೋಪಿಸಿದ್ದಾರೆ, ಕೂಡಲೇ ಈ ಕುರಿತು ತನಿಖೆ ನಡೆಸಬೇಕು ಎಂದು ದೂರು ನೀಡಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕ್‌ಗಳು ಯಾವುದೇ ಆಸ್ತಿಯ ಆಧಾರದ ಮೇಲೆ ಸಾಲ ನೀಡಲು ಪ್ರಮಾಣ ನಿಗದಿಪಡಿಸಲಾಗುತ್ತದೆ. ಆದರೆ, ಸಚಿವರಿಗೆ ಇಷ್ಟೊಂದು ಪ್ರಮಾಣದ ಸಾಲ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಒಂದೇ ಜಮೀನಿನ ದಾಖಲೆಗಳನ್ನು ಪ್ರಸ್ತುತಪಡಿಸಿ, ಹಲವು ಬಾರಿ ಸಾಲ ಪಡೆದುಕೊಳ್ಳಲಾಗಿದೆ. ಸಚಿವರಿಗೆ ಸಾಲ ಮಂಜೂರು ಮಾಡಿರುವುದರ ಹಿಂದೆ  ಬ್ಯಾಂಕ್ ಮ್ಯಾನೇಜರ್ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕಡಿಮೆ ಮೊತ್ತದ ಆಸ್ತಿ ಅಡ ಇರಿಸಿಕೊಂಡು ಭಾರಿ ಮೊತ್ತದ ಸಾಲ ನೀಡಲು ಬ್ಯಾಂಕ್‌ನವರಿಗೆ ತಲೆ ಕೆಟ್ಟಿಲ್ಲ. ಈ ರೀತಿ ಆರೋಪ ಮಾಡಿರುವವರಿಗೇ ತಲೆ ಕೆಟ್ಟಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಪ್ರತಿಕ್ರಿಯಿಸಿದ್ದಾರೆ.
ನಮ್ಮ ತಂದೆಯ ಕಾಲದಿಂದಲೂ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ನಮ್ಮ ವ್ಯವಹಾರ ಇದೆ. ನಾನು ಸಾಲ ಪಡೆಯುವಾಗ ಎಷ್ಟು ಪ್ರಮಾಣದ ಆಸ್ತಿಯನ್ನು ಅಡ ಇರಿಸಬೇಕೋ ಅದಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಅಡ ಇಟ್ಟಿದ್ದೇನೆ. ನನ್ನ ವಿರುದ್ಧದ ಆರೋಪಗಳು ಸಂಪೂರ್ಣ ಸುಳ್ಳು’ ಎಂದು ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com