ಸಮಿತಿಯು ಪ್ರಮುಖವಾಗಿ 135 ಶಿಫಾರಸುಗಳನ್ನು ಒಳಗೊಂಡ ಒಟ್ಟು 6,105 ಪುಟಗಳ ವರದಿಯನ್ನು ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತು. ವರದಿ ಸಲ್ಲಿಕೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಗ್ರಪ್ಪ ''ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ಎಲ್ಲ ರಾಜ್ಯಗಳಲ್ಲೂ ಸಾಮಾನ್ಯ ಸಮಸ್ಯೆಯಾಗಿದೆ. ಶೇ.50 ಮಹಿಳೆಯರು ಹಾಗೂ ಶೇ.38 ಮಕ್ಕಳಿರುವ ನಮ್ಮ ಸಮಾಜದಲ್ಲಿ ಆರೋಗ್ಯಕರ ವ್ಯವಸ್ಥೆಗಾಗಿ ಈ ಬಹುಸಂಖ್ಯಾತ ಮಹಿಳೆ ಮತ್ತು ಮಕ್ಕಳಿಗೆ ಉತ್ತಮ ಬದುಕಿನ ಪರಿಸರ ರೂಪಿಸಿ ರಕ್ಷಣೆ ಒದಗಿಸಬೇಕಿದೆ. ಅದಕ್ಕಾಗಿ ಕೆಲವೊಂದು ಕಾಯಿದೆ, ಕಾನೂನುಗಳಿಗೆ ತಿದ್ದುಪಡಿ ಅಗತ್ಯವಿದ್ದು, ರಾಷ್ಟ್ರೀಯ ನೀತಿ ರೂಪಿಸುವಂತೆ ಸಮಿತಿ ಶಿಫಾರಸು ಮಾಡಿದೆ'' ಎಂದು ತಿಳಿಸಿದರು.