

ಬೆಂಗಳೂರು : ಬಿಡಬ್ಲ್ಯೂಎಸ್ ಎಸ್ ಬಿ ಪಂಪ್ ದುರಸ್ತಿ ಕಾರ್ಯ ಅನುಷ್ಠಾನಗೊಂಡರೆ ಯಾವುದೇ ಬಂಡವಾಳ ಹೂಡಿಕೆ ಇಲ್ಲದೆ ಪ್ರತಿದಿನ ಹೆಚ್ಚುವರಿಯಾಗಿ 25 ಮಿಲಿಯನ್ ಲೀಟರ್ ನೀರನ್ನು ಪ್ರತಿದಿನ ಪೂರೈಸಬಹುದಾಗಿದೆ.
ಅಲ್ಲದೇ, ಮಂಡಳಿಯ ಮಾಸಿಕ ವಿದ್ಯುತ್ ಬಿಲ್ಲನ್ನು 1.25 ಕೋಟಿ ರೂನಷ್ಟು ಕಡಿಮೆ ಮಾಡಲು ನೆರವಾಗಲಿದೆ. ಇದಕ್ಕಾಗಿ ಮಂಡಳಿ ಯಾವುದೇ ವೆಚ್ಚಮಾಡದೆ ಖಾಸಗಿ ಸಂಸ್ಥೆಗಳಿಗೆ ಯೋಜನೆ ಒಪ್ಪಿಸಿ ಆಧುನಿಕರಣಗೊಳಿಸಬಹುದಾಗಿದೆ.
ಪಂಪ್ ನವೀಕರಣದಿಂದ ಬಿಡಬ್ಲ್ಯೂಎಸ್ ಎಸ್ ಬಿಗೆ ತಿಂಗಳಿಗೆ 20 ಕೋಟಿ ರೂನಷ್ಟು ವಿದ್ಯುತ್ ಬಿಲ್ ಹಾಗೂ 8 ಕೋಟಿ ರೂ ನಿರ್ವಹಣಾ ವೆಚ್ಚ ಉಳಿತಾಯವಾಗಲಿದೆ.
ಕಾವೇರಿ ನೀರು ಪೂರೈಕೆ ಯೋಜನೆಯ 1, 2 ಹಾಗೂ ಮೂರನೇ ಹಂತದ ಯೋಜನೆಗಾಗಿ ಬಳಸುತ್ತಿರುವ ಬೃಹತ್ ಗಾತ್ರದ 9 ಪಂಪ್ ಗಳ ನವೀಕರಣಕ್ಕಾಗಿ 200 ಕೋಟಿ ರೂಗಳ ಪ್ರಸ್ತಾವನೆ ಇಡಲಾಗಿದ್ದು, ಮಂಡಳಿಯ ಸದಸ್ಯರಿಂದ ಅನುಮೋದನೆಗಾಗಿ ಕಾಯಲಾಗುತ್ತಿದೆ.
100 ಕಿಲೋ ಮೀಟರ್ ದೂರದಲ್ಲಿರುವ ತೊರೆಕಾಡನಹಳ್ಳಿ, ಹಾರೋಹಳ್ಳಿ, ತಾತಗುಣಿ ಪಂಪ್ ಸ್ಟೇಷನ್ ನಿಂದ ನಿತ್ಯ ಬೆಂಗಳೂರಿಗೆ ನೀರು ಪೂರೈಕೆ ಮಾಡಲಾಗುತ್ತಿದೆ . ನೀರು ಸೋರಿಕೆ, ಇದಕ್ಕಿದ್ದಂತೆ ಪಂಪ್ ಗಳ ಸ್ಥಗಿತ ಮತ್ತಿತರ ಕಾರಣಗಳಿಂದ ಕೆಲವೇಳೆ ನಗರಕ್ಕೆ ನೀರು ಬಾರದಂತಾಗುತ್ತದೆ.
ದುರಸ್ತಿಗೊಂಡ ನಂತರ ಮತ್ತೆ ಪ್ರಾರಂಭಿಸಿದ್ದರೆ. ವಿದ್ಯುತ್ ನ್ನು ಹೆಚ್ಚಾಗಿ ಬಳಸಿಕೊಳ್ಳುತ್ತವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಹಂತದ ಪಂಪ್ ಗಳನ್ನು 1973 ರಲ್ಲಿ ಅಳವಡಿಸಲಾಗಿದ್ದು, ಪ್ರಸ್ತುತ ಈ ಪಂಪ್ ಗಳ ನಿರ್ವಹಣೆಗಾಗಿ ಮಂಡಳಿ ಪ್ರತಿ ತಿಂಗಳು 45 ಲಕ್ಷ ವೆಚ್ಚ ಮಾಡುತ್ತಿದೆ. ಸೋರಿಕೆ ಸಾಮಾನ್ಯವಾಗಿ ಕಂಡುಬರುತ್ತಿದ್ದು, ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
1983 ರಲ್ಲಿ ಎರಡನೇ ಹಂತ ಹಾಗೂ 1993ರಲ್ಲಿ ಮೂರನೇ ಹಂತದಲ್ಲಿ ಪೈಪ್ ಗಳನ್ನು ಅಳವಡಿಸಲಾಗಿದ್ದು, ಮೂರು ಯೋಜನೆಯ ಪಂಪ್ ಗಳಿಂದ ಬೆಂಗಳೂರಿಗೆ ನಿತ್ಯ 600 ಮಿಲಿಯನ್ ಲೀಟರ್ ನೀರು ಪೂರೈಸಲಾಗುತ್ತಿದೆ.
ಇವುಗಳನ್ನು ನವೀಕರಣಗೊಳಿಸಿದ್ದರೆ ನೀರಿನ ಸೋರಿಕೆಯನ್ನು ತಡೆಗಟ್ಟಬಹುದು, ಅಲ್ಲದೇ ನಿತ್ಯ 25 ಮಿಲಿಯನ್ ಲೀಟರ್ ಹೆಚ್ಚುವರಿ ನೀರನ್ನು ಬೆಂಗಳೂರಿಗೆ ಪೂರೈಸಬಹುದು ಎಂದು ಅವರು ಬಿಡಬ್ಲ್ಯೂಎಸ್ ಎಸ್ ಬಿ ಅಧಿಕಾರಿಳು ಹೇಳಿದ್ದಾರೆ.