ಬೆಂಗಳೂರು: ಬರಗಾಲಪೀಡಿತ ಎಂದು ಘೋಷಣೆಯಾಗಿರುವ ರಾಜ್ಯದ 110 ತಾಲ್ಲೂಕುಗಳಲ್ಲಿ ಪರಿಹಾರ ಕಾರ್ಯ ಒದಗಿಸಲು ಅದರ ಮೇಲುಸ್ತುವಾರಿಗೆ ಸರ್ಕಾರ ನಾಲ್ಕು ಸಂಪುಟ ಉಪ ಸಮಿತಿಗಳನ್ನು ರಚಿಸಿದೆ.
ಪರಿಹಾರ ಕಾರ್ಯಕ್ಕೆ ರಾಜ್ಯ ಸರ್ಕಾರ 220 ಕೋಟಿ ರೂಪಾಯಿಗಳನ್ನು ಒದಗಿಸಿದೆ. ಪ್ರತಿ ಕಂದಾಯ ಜಿಲ್ಲೆಗೆ ಒಂದು ಸಂಪುಟ ಉಪ ಸಮಿತಿಯಂತೆ ನೇಮಿಸಲಾಗುತ್ತಿದ್ದು ಪರಿಹಾರ ಕಾರ್ಯದ ಸುಗಮಕ್ಕೆ ಪ್ರಧಾನ ಕಾರ್ಯದರ್ಶಿ ದರ್ಜೆಯ ಸಮನ್ವಯ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ಕಂದಾಯ ಸಚಿವ ಆರ್ ವಿ ದೇಶಪಾಂಡೆ ತಿಳಿಸಿದರು.
ಕುಡಿಯುವ ನೀರು ಪೂರೈಕೆಗೆ ವಿಶೇಷ ಒತ್ತು ನೀಡಲಾಗುತ್ತಿದ್ದು ಪ್ರತಿ ಬರಗಾಲ ಪೀಡಿತ ತಾಲ್ಲೂಕಿಗೆ ಕುಡಿಯುವ ನೀರು ಒದಗಿಸಲು ತಲಾ 50 ಲಕ್ಷ ರೂಪಾಯಿಗಳನ್ನು ನೀಡಲಾಗುವುದು. ಜಾನುವಾರುಗಳಿಗೆ ಮೇವು ಒದಗಿಸಲು ವಿಶೇಷ ವ್ಯವಸ್ಥೆ ಮಾಡಲಾಗುವುದು ಮತ್ತು ಮೇವು ರಾಜ್ಯದಿಂದ ಹೊರಹೋಗದಂತೆ ನೋಡಿಕೊಳ್ಳಲು ಸರ್ಕಾರ ಮೇವು ರಫ್ತಿಗೆ ನಿಷೇಧ ಹೇರಿದೆ ಎಂದು ಕೂಡ ಸಚಿವ ದೇಶಪಾಂಡೆ ತಿಳಿಸಿದರು.
ಕಡತ ವಿಲೇವಾರಿ ಸಪ್ತಾಹದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಪ್ತಾಹದಲ್ಲಿ ನಾವು 2.56 ಲಕ್ಷ ಕಡತಗಳನ್ನು ವಿಲೇವಾರಿ ಮಾಡಿದ್ದೇವೆ ಎಂದರು.
Advertisement