ಸಕಲೇಶಪುರ: ತಾಲ್ಲೂಕಿನ ಕಡಗರವಳ್ಳಿ ಗ್ರಾಮದಲ್ಲಿ ಸತತ 36 ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಂತರ 27 ವರ್ಷದ ಹೆಣ್ಣು ಆನೆಯನ್ನು ರಕ್ಷಿಸಲಾಗಿದೆ. ಆನೆ ಕಂದಕಕ್ಕೆ ಬಿದ್ದು ಮೇಲೆ ಏಳಲಾಗದೆ ಪರಿತಾಪಪಡುತ್ತಿತ್ತು.
ನಡೆದದ್ದೇನು?: ಎರಡು ದಿನಗಳ ಹಿಂದೆ ಆನೆ ಆಹಾರ ಹುಡುಕಿಕೊಂಡು ತನ್ನ ಆರು ತಿಂಗಳ ಮರಿಯೊಂದಿಗೆ ಕಡಗರವಳ್ಳಿ ಗ್ರಾಮಕ್ಕೆ ಹೋಗಿತ್ತು. ಈ ಸಂದರ್ಭದಲ್ಲಿ ಕಾಲು ಜಾರಿ ಹೂಳು ತುಂಬಿದ ಕಂದಕಕ್ಕೆ ಬಿದ್ದಿತು. ಆನೆಯ ಎದುರಿನ ಕಾಲಿಗೆ ಅದಾಗಲೇ ಗಾಯವಾಗಿತ್ತು. ಇದರಿಂದ ಕಂದಕದಿಂದ ಏಳುವುದು ಕೂಡ ಕಷ್ಟವಾಗಿತ್ತು.
ಕಳೆದ ಸೋಮವಾರ ಬೆಳಗ್ಗೆ ಗ್ರಾಮಸ್ಥರು ಆನೆ ಕಂದಕಕ್ಕೆ ಬಿದ್ದ ವಿಚಾರವನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಭೂಮಿಯಲ್ಲಿ ತಿರುಗುವ ಯಂತ್ರಕ್ಕೆ ಹಗ್ಗ ಕಟ್ಟಿ ಆನೆಯನ್ನು ಮೇಲೆತ್ತಲು ಪ್ರಯತ್ನಿಸಿದರು. ಆದರೆ ಪ್ರಯೋಜನವಾಗಲಿಲ್ಲ. ವಾತಾವರಣ ಕೈಕೊಟ್ಟಿತ್ತು. ಕೊನೆಗೆ ದುಬಾರೆ ಆನೆ ಶಿಬಿರದಿಂದ ಎರಡು ಆನೆಗಳನ್ನು ಕರೆತಂದು ಆನೆಯನ್ನು ಮೇಲೆತ್ತಲು ನಡೆಸಿದ ಕಾರ್ಯಾಚರಣೆ ನೆರವಿಗೆ ಬಂದಿತು.
ಆನೆ ಮತ್ತು ಮರಿಯನ್ನು ನಂತರ ಶಿವಮೊಗ್ಗದ ಸಕ್ರೆಬೈಲು ಶಿಬಿರಕ್ಕೆ ವರ್ಗಾಯಿಸಲಾಯಿತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Advertisement