ಬೆಂಗಳೂರು: ನಾಡಗೀತೆ ಗಾಯನದ ಅವಧಿ ಕುರಿತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ನೇತೃತ್ವದ ಸಮಿತಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ವರದಿ ಸಲ್ಲಿಸಲಿದೆ.
ನಾಡಗೀತೆ ಹಾಡುವ ಅವಧಿ 2 ನಿಮಿಷ 30 ಸೆಕೆಂಡ್ ಇರುವಂತೆ ಸಮಿತಿ ಶಿಫಾರಸು ಮಾಡಿದೆ. ಪ್ರಸ್ತುತ ನಾಡಗೀತೆ ಹಾಡಿ ಮುಗಿಸಲು 6 ನಿಮಿಷದಿಂದ 9 ನಿಮಿಷಗಳು ಬೇಕಾಗುತ್ತದೆ. ಅದರಲ್ಲಿ ಮಧ್ಯದಲ್ಲಿ ಪಕ್ಕವಾದ್ಯ ಸಂಗೀತ ಮತ್ತು ಕೆಲವು ಸಾಲುಗಳ ಪುನರಾವರ್ತನೆ ಕೂಡ ಒಳಗೊಂಡಿರುತ್ತದೆ.
ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ನಾಡಗೀತೆಯನ್ನು 2 ನಿಮಿಷ 20 ಸೆಕೆಂಡ್ ನಿಂದ 2 ನಿಮಿಷ 30 ಸೆಕೆಂಡ್ ಗಳೊಳಗೆ ಹಾಡಿ ಮುಗಿಸಬಹುದು ಎಂದು ಇತ್ತೀಚೆಗೆ ಗಾಯಕರು, ಕಲಾವಿದರು, ಸಂಗೀತಜ್ಞರು, ಬರಹಗಾರರು ಮತ್ತು ಕನ್ನಡಪರ ಕಾರ್ಯಕರ್ತರು ಚರ್ಚೆ ಮಾಡಿದ್ದರು. ಅದಕ್ಕೆ ನಾವು ಅವಿರೋಧವಾಗಿ ಒಪ್ಪಿಗೆ ಸೂಚಿಸಿದ್ದೇವೆ. ಅದನ್ನು ಇಂದು ಮುಖ್ಯಮಂತ್ರಿಗಳಿಗೆ ನೀಡಲಾಗುವುದು ಎಂದು ಹೇಳಿದರು.
ನ.29ಕ್ಕೆ ರಾಜ್ಯೋತ್ಸವ ಕಾರ್ಯಕ್ರಮ: ಕೊನೆಗೂ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವವನ್ನು ಇದೇ 29ರಂದು ಆಚರಿಸುತ್ತಿದೆ. ಇಲ್ಲಿ 63 ಮಂದಿ ಮತ್ತು ಸಂಸ್ಥೆಗಳಿಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಿದ್ದಾರೆ.
Advertisement