ಬಡತನದಿಂದ ಕಾಲೇಜು ಸೇರಲಾಗದ ಜಿಲ್ಲಾ ಪಂಚಾಯತ್ ಸದಸ್ಯನಿಂದ ಬಡ ಮಕ್ಕಳಿಗೆ ನೆರವು!

ಆರ್ಥಿಕ ಸಮಸ್ಯೆಯಿಂದಾಗಿ ನಿಂಗಪ್ಪ ಗಟಿನ್(43ವ) ಅವರಿಗೆ ಹತ್ತನೇ ತರಗತಿಯಿಂದ ಮುಂದೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಧಾರವಾಡ: ಆರ್ಥಿಕ ಸಮಸ್ಯೆಯಿಂದಾಗಿ ನಿಂಗಪ್ಪ ಗಟಿನ್(43ವ) ಅವರಿಗೆ ಹತ್ತನೇ ತರಗತಿಯಿಂದ ಮುಂದೆ ಕಾಲೇಜಿಗೆ ಹೋಗಲು ಸಾಧ್ಯವಾಗಿರಲಿಲ್ಲ. ತನ್ನ ಕೈಯಲ್ಲಿ ಆಗದ ಕೆಲಸವನ್ನು ಇದೀಗ ಬಡ ಮಕ್ಕಳಿಗೆ ದಾನ ಮಾಡುವ ಮೂಲಕ ಮಕ್ಕಳಿಗೆ ಓದಿಗೆ ನೆರವಾಗುತ್ತಿದ್ದಾರೆ ಈ ನಿಂಗಪ್ಪ.

ಅವರಿಗೆ ಬರುವ 5 ಸಾವಿರ ರೂಪಾಯಿ ಗೌರವಧನವನ್ನು ಪ್ರತಿ ತಿಂಗಳು ಪ್ರತಿಭಾವಂತ ಮತ್ತು ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ನೀಡುತ್ತಿದ್ದು ಇದುವರೆಗೆ ಸುಮಾರು 300 ಮಕ್ಕಳು ಅವರಿಂದ 2 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ.

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುವ ಗಟಿನ್, ಆರ್ಥಿಕ ಸಮಸ್ಯೆಯಿಂದ ತಾವು ಅರ್ಧಕ್ಕೇ ಓದನ್ನು ನಿಲ್ಲಿಸಿದಂತೆ ಇಂದಿನ ಜನಾಂಗದ ಮಕ್ಕಳು ಆಗುವುದು ಬೇಡ ಎಂಬುದು ಅವರ ಬಯಕೆ. ತಾವು ಚಿಕ್ಕವರಿರುವಾಗ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರಿಂದ 4ನೇ ತರಗತಿಯಲ್ಲಿ ಓದನ್ನು ನಿಲ್ಲಿಸಿದರು. ಸ್ವಲ್ಪ ವರ್ಷಗಳ ನಂತರ ಹತ್ತನೇ ತರಗತಿಯನ್ನು ಖಾಸಗಿಯಾಗಿ ಕಟ್ಟಿ ಪಾಸು ಮಾಡಿಕೊಂಡಿದ್ದರು. ಆದರೆ ಮುಂದೆ ಕಾಲೇಜಿಗೆ ಹೋಗಲು ಸಾಧ್ಯವಾಗಿರಲಿಲ್ಲ.

ಮೂರ್ಕಟ್ಟಿ ಗ್ರಾಮ ಪಂಚಾಯತ್ ಸದಸ್ಯರಾಗಿ 2005ರಲ್ಲಿ ನೇಮಕಗೊಂಡಲ್ಲಿಂದ ಗಟಿನ್ ಅವರ ರಾಜಕೀಯ ಜೀವನ ಆರಂಭವಾಯಿತು. ಆ ಬಳಿಕ ತಮಗೆ ಬರುವ ಸಂಭಾವನೆಯಲ್ಲಿ ಒಂದು ರೂಪಾಯಿಯನ್ನು ಕೂಡ ಅವರು ತಮ್ಮ ಸ್ವಂತಕ್ಕೆ ಬಳಸಿಲ್ಲ, ಪ್ರತಿ ವರ್ಷ ತಮ್ಮ ಗ್ರಾಮದಲ್ಲಿ ಕಾರ್ಯಕ್ರಮಗಳನ್ನು, ಪ್ರತಿಭಾ ಪುರಸ್ಕಾರ ಮತ್ತು ಅಗತ್ಯವುಳ್ಳ ಬಡ ಮಕ್ಕಳಿಗೆ ತಮ್ಮ ಸಂಭಾವನೆಯನ್ನು ಹಂಚುತ್ತಾರೆ.

ಶಿಕ್ಷಣ ಪ್ರತಿಯೊಬ್ಬರಿಗೂ ಅಗತ್ಯವಿದೆ. ಕುಟುಂಬವನ್ನು ಬಡತನದಿಂದ ಕಿತ್ತೊಗೆಯಲು ಶಿಕ್ಷಣ ನೆರವಾಗುತ್ತದೆ. ಅಭಿವೃದ್ಧಿಗೆ ಶಿಕ್ಷಣ ಬೇಕು. ನಾನು ಕಂಡ ಕನಸನ್ನು ಇಂದಿನ ಮಕ್ಕಳ ಮೂಲಕ ಈಡೇರಿಸಲು ಪ್ರಯತ್ನಿಸುತ್ತೇನೆ ಎನ್ನುತ್ತಾರೆ ನಿಂಗಪ್ಪ ಗಟಿನ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com