ಮೃತ ರಮೇಶ್ ಕುಮಾರ್ ಜೈನ್ ಹಾಗೂ ಹತ್ಯೆಯ ಆರೋಪಿಗಳು
ಮೃತ ರಮೇಶ್ ಕುಮಾರ್ ಜೈನ್ ಹಾಗೂ ಹತ್ಯೆಯ ಆರೋಪಿಗಳು

ಬೆಂಗಳೂರು: ಮನೆ ಬಾಡಿಗೆ ಕೇಳಿದ್ದಕ್ಕೆ ಚಿತ್ರ ನಿರ್ಮಾಪಕನನ್ನೇ ಕೊಂದು ಕಾಲುವೆಗೆ ಎಸೆದ್ರು!

ಮನೆ ಬಾಡಿಗೆ ಕೊಡುವ ವಿಚಾರದಲ್ಲಿ ಉಂತಾದ ಜಗಳ ವಿವಾದ ಸ್ವರೂಪ ಪಡೆದದ್ದಲ್ಲದೆ ಮನೆ ಮಾಲೀಕ, ಕನ್ನಡ ಚಲನಚಿತ್ರ ನಿರ್ಮಾಪಕರೊಬ್ಬರ ಜೀವಕ್ಕೆ ಕುತ್ತು ತಂದಿರುವ ಘಟನೆ....
Published on
ಬೆಂಗಳುರು: ಮನೆ ಬಾಡಿಗೆ ಕೊಡುವ ವಿಚಾರದಲ್ಲಿ ಉಂತಾದ ಜಗಳ ವಿವಾದ ಸ್ವರೂಪ ಪಡೆದದ್ದಲ್ಲದೆ ಮನೆ ಮಾಲೀಕ, ಕನ್ನಡ ಚಲನಚಿತ್ರ ನಿರ್ಮಾಪಕರೊಬ್ಬರ ಜೀವಕ್ಕೆ ಕುತ್ತು ತಂದಿರುವ ಘಟನೆ ಬೆಂಗಳೂರಿನ ಕೆಗೇರಿಯಲ್ಲಿ ನಡೆದಿದೆ.
ಬುಧವಾರ  ನಡೆದಿದ್ದ ಘಟನೆ ಸಂಬಂಧ  ಇಬ್ಬರು ಮಹಿಳೆಯರೂ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಶುಕ್ರವಾರ ಕೆಂಗೇರಿ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಆರ್.ಪಿ.ಸಿ ಲೇಔಟ್ ನಿವಾಸಿ ಚಲನಚಿತ್ರ ನಿರ್ಮಾಪಕ ರಮೇಶ್ ಕುಮಾರ್ ಜೈನ್ (62) ಹತ್ಯೆಯಾದ ದುರ್ದೈವಿ. ಇವರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು.
ಬಂಧಿತರನ್ನು ನಜೀರ್, ಇಸ್ಲಾಮ್ ಪಾಶಾ ಅಲಿಯಾಸ್ ಇಸ್ಲಾಮ್ ಅಬ್ದುಲ್ ಅಶೀಮ್, ಸಯೀದ್ ಅಹಮದ್, ಮಹಮದ್ ಜುಬೇರ್, ನಜೀರ್ ನ ಪತ್ನಿ ಶಬೀನಾ ತಾಜ್ ಹಾಗೂ ಆಕೆಯ ಪುತ್ರಿ ಹೀನಾ ಎಂದು ಗುರುತಿಸಲಾಗಿದೆ.ಈ ಎಲ್ಲರೂ ಬಾಪೂಜಿನಗರದ ನಿವಾಸಿಗಳಾಗಿದ್ದರು.
ನಜೀರ್ ಎಕ್ಸ್ ಪೋರ್ಟ್ ವ್ಯವಹಾರ ನಡೆಸುತ್ತಿದ್ದ. ಈತ ದೀಪಾಂಜಲಿ ನಗರದಲ್ಲಿರುವ ಜೈನ್ ಅವರ ನಿವಾಸವನ್ನು ಹತ್ತು ವರ್ಷಗಳ ಕಾಲ ಬಾಡಿಗೆಗೆ ಪಡೆದಿದ್ದ. ಆದರೆ ಬಾಡಿಗೆ ಹಣ ಪಾವತಿ ಬಗ್ಗೆ ಜಗಳ ಪ್ರಾರಂಭವಾಗಿತ್ತು. ಅಲ್ಲದೆ ಇಬ್ಬರ ನಡುವೆ ಹಣಕಾಸಿನ ಕುರಿತು ವಿವಾದವಿತ್ತು.ನವೆಂಬರ್ 28ರಂದು ನಜೀರ್ ವಾಸವಿದ್ದ ಮನೆಗೆ ಜೈನ್ ಬಾಡಿಗೆ ಹಣ ಪಡೆಯಲು ಆಗಮಿಸುತ್ತಾರೆ. ಆಗ ನಜೀರ್ ತನ್ನ ಸಹಚರರನ್ನು ಸಹ ಕರೆಸಿಸ್ಕೊಂಡಿದ್ದ. ಬಾಡಿಗೆ ಪಡೆಯ ಬಂದ ಜೈನ್ ಅವರನ್ನು ಮನೆಯೊಳಗೆ ಕರೆದು ಬಳಿಕ ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ಇಬ್ಬರ ನಡುವೆ ದೊಡ್ಡ ಪ್ರಮಾಣದ ಜಗಳವೇ ಆಗಿದ್ದು ಬಳಿಕ ಎಲ್ಲರೂ ಸೇರಿ ರಮೇಶ್ ಕುಮಾರ್ ಜೈನ್ ಅವರನ್ನು ಮಂಚದ ಮೇಲೆ ಮಲಗಿಸಿ ಅಲ್ಲೇ ಉಸಿರುಗಟ್ಟಿಸಿ ಕೊಂದು ಬಿಡುತ್ತಾರೆ. 
ಆ ನಂತರ ಇಸ್ಲಾಮ್ ತನ್ನ ಆಟೋರಿಕ್ಷಾ ತಂದು ಮೃತ ಜೈನ ಅವರ ದೇಹವನ್ನು ಕೆಂಗೇರಿ ಸಮೀಪದ ದುಬಾಸಿಪಾಳ್ಯ ರಾಜಕಾಲುವೆಗೆ ಎಸೆಯುತ್ತಾರೆ. ನ.27ರಂದು ಬಾಡಿಗೆ ತೆಗೆದುಕೊಂಡು ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ಜೈನ್ ಹಿಂದಿರುಗದಿದ್ದಾಗ ಅವರ ಮಗ ರಾಕೇಶ್ ವಿಜಯನಗರ ಪೋಲೀಸರಲ್ಲಿ ದೂರು ಸಲ್ಲಿಸುತ್ತಾರೆ.
ಶುಕ್ರವಾರ ದುಬಾಸಿಪಾಳ್ಯ ಕಾಲುವೆಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾದಾಗ ಕೆಂಗೇರಿ ಪೋಲೀಸರು ಚುರುಕಾಗುತ್ತಾರೆ.ಮತ್ತು ಆ ಮೃತದೇಹದ ಬಳಿ ಸಿಕ್ಕಿದ ಪರ್ಸ್ ನಲ್ಲಿದ್ದ ಡ್ರೈವಿಂಗ್ ಲೈಸನ್ಸ್ ಹಾಗೂ ಭಾವಚಿತ್ರದ ಕಾರಣ ಇದು ಕಳೆದ ಮುರು ದಿನಗಳಿಂದ ನಾಪತ್ತೆಯಾಗಿದ್ದ ರಮೇಶ್ ಕುಮಾರ್ ಅವರದೇ ದೇಹವೆಂದು ತಿಳಿದುಬರುತ್ತದೆ.
"ಬೆಳಗಾವಿಯವನಾಗಿದ್ದ ನಜೀರ್ ನಮ್ಮ ತಂದೆಯ ಕಾರ್ಖಾನೆಯಿಂದ ಇತರ ರಾಜ್ಯಗಳಿಗೆ ರಫ್ತು ಮಾಡಲು ವಸ್ತುಗಳನ್ನು ಖರೀದಿಸುತ್ತಿದ್ದ. ಕಳೆದ ಐದು ವರ್ಷಗಳ ಹಿಂದೆ ಆತ ನಮ್ಮಲ್ಲಿ ಬಾಡಿಗೆಗೆ ಪಡೆದಿದ್ದ ಮನೆಗೆ ಸರಿಯಾಗಿ ಬಾಡಿಗೆ ಪಾವತಿಸದ ಕಾರಣ ಮನೆ ಖಾಲಿ ಂಆಡಲು ಕೇಳಿದ್ದೆವು. ಆದರೆ ನಜೀರ್ ಇದಕ್ಕೊಪ್ಪದೆ ನಮ್ಮ ತಂದೆಗೆ ಬೆದರಿಕೆ ಹಾಕುತ್ತಿದ್ದ. 
"ಅಲ್ಲದೆ ನಜೀರ್ ಪತ್ನಿ ಶಬಾನಾ ಹಾಗೂ ಮಗಳು ಹೀನಾ ಮನೆಯಲ್ಲಿ ವೇಶ್ಯಾವಾಟಿಕೆ ಕಸುಬು ಪ್ರಾರಂಭಿಸಿದ್ದರು. ನೆರೆಹೊರೆಯವರು ಈ ಸಂಬಂಧ ನಮ್ಮಲ್ಲಿ ದೂರುತ್ತಿದ್ದರು.ಇದೇ ಕಾರಣ ನಮ್ಮ ತಂದೆ ನ್ಯಾಯಾಲಯಕ್ಕೆ ತೆರಳಿದ್ದರು. ಇತ್ತೀಚೆಗೆ ನ್ಯಾಯಾಲಯ ನಜೀರ್ ಗೆ ಮನೆ ಕಾಲಿ ಮಾಡುವಂತೆ ನೋಟೀಸ್ ನೀಡಿತ್ತು. ಮೂರು ದಿನಗಳ ಹಿಂದಷ್ಟೇ ನಜೀರ್ ನಮ್ಮ ತಂದೆಯ ಸಹಿಯನ್ನು ನಕಲು ಮಾಡಿ ಆ ಮನೆಯನ್ನು ತಾನೇ ಖರೀದಿಸಿದ್ದನೆಂದು ನಕಲಿ ದಾಖಲೆ ಸೃಷ್ಟಿಸಿದ್ದ.ನಿಜಕ್ಕೂ ಈ ಆಸ್ತಿ ನಮ್ಮ ಅಜ್ಜಿಯ ಹೆಸರಲ್ಲಿದೆ. ನಜೀರ್ ಗೆ ಸಹ ಈ ವಿಚಾರ ತಿಳಿದಿರಲಿಲ್ಲ. ಆತ ನಮ್ಮ ತಂದೆಗೆ ಈ ಆಸ್ತಿ ಖರೀದಿ ಪತ್ರವನ್ನು ತೋರಿಸಿದ್ದ, ಬಳಿಕ ಆತ ಹಾಗೂ ಅವನ ಸಹಚರರು ಸೇರಿ ನಮ್ಮ ತಂದೆಯನ್ನು ಬಲವಂತದಿಂದ ಬೆಡ್ ಮೇಲೆ ಮಲಗಿಸಿ ಉಸಿರುಗಟ್ಟಿಸಿ ಕೊಂದಿದ್ದಾರೆ" ರಮೇಶ್ ಪುತ್ರ ರಾಕೇಶ್ ವಿವರಿಸಿದರು.
ಮೃತ ರಮೇಶ್ ಕುಮಾರ್ ಸುಹಾಸಿನಿ ಹಾಗೂ ಜೈ ಜಗದೀಶ್ ಅಭಿನಯದ ಹಾರರ್ ಚಿತ್ರ "ನಾನಿ" ಸೇರಿ ಕೆಲವು ಕನ್ನಡ ಚಲನಚಿತ್ರಗಳನ್ನು ನಿರ್ಮಾಣ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com