ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರ ಮೂರ್ತಿಯನ್ನು ಬೌದ್ಧ ಸನ್ಯಾಸಿ ರೂಪದಲ್ಲಿ ಸ್ಥಾಪಿಸಿ: ಪ್ರೊ. ಕೆ.ಎಸ್.ಭಗವಾನ್

ಚಾಮುಂಡಿ ಬೆಟ್ಟದ ಮೇಲೆ ಬೌದ್ಧ ಸನ್ಯಾಸಿನಿಯ ನೋಟದಲ್ಲಿ ಸುಧಾರಿತ ಮಹಿಷಾಸುರನ ...
ಮೈಸೂರಿನಲ್ಲಿ ವಿಜಯ ದಶಮಿ ಕೊನೆಯ ದಿನದ ಕಾರ್ಯಕ್ರಮದಲ್ಲಿ ಕಲಾವಿದರು
ಮೈಸೂರಿನಲ್ಲಿ ವಿಜಯ ದಶಮಿ ಕೊನೆಯ ದಿನದ ಕಾರ್ಯಕ್ರಮದಲ್ಲಿ ಕಲಾವಿದರು
Updated on

ಮೈಸೂರು: ಚಾಮುಂಡಿ ಬೆಟ್ಟದ ಮೇಲೆ ಬೌದ್ಧ ಸನ್ಯಾಸಿನಿಯ ನೋಟದಲ್ಲಿ ಸುಧಾರಿತ ಮಹಿಷಾಸುರನ ಮೂರ್ತಿಯನ್ನು ಕೂಡ ಸ್ಥಾಪಿಸಬೇಕೆಂದು ಹೇಳುವ ಮೂಲಕ ಪ್ರಗತಿಪರ ಚಿಂತಕ ಪ್ರೊ ಕೆ ಎಸ್ ಭಗವಾನ್ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ಈಗಿರುವ ಮೂರ್ತಿ ರಾಜರುಗಳ ಕಾಲದಲ್ಲಿ ಸ್ಥಾಪಿತವಾದದ್ದು ಎಂದು ನಂಬಲಾಗಿದ್ದು, ಅದನ್ನು ತೆಗೆದು ಆ ಸ್ಥಳದಲ್ಲಿ ಹೊಸ ಮೂರ್ತಿಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1950ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರ ಕಾಲದಲ್ಲಿದ್ದ ಪುರೋಹಿತರು ತಪ್ಪುದಾರಿಗೆಳೆದು ಮಹಿಷಾಸುರನನ್ನು ರಾಕ್ಷಸ ದೊರೆ ಎಂದು ಬಿಂಬಿಸಿದ್ದರು. ನಾವು ಪ್ರಾಯೋಗಿಕ ರೀತಿಯಲ್ಲಿ ಯೋಚಿಸಿದರೆ, ರಾಕ್ಷಸ ರಾಜನಿಂದ ಮೈಸೂರು ಎಂದು ಹೆಸರು ಬರಲು ಸಾಧ್ಯವಾಗುತ್ತಿರಲಿಲ್ಲ. ವಾಸ್ತವವಾಗಿ ಮಹಿಷಾಸುರ ಯಾವುದೇ ಜಾತಿ ಧರ್ಮದ ಭೇದವಿಲ್ಲದೆ ಸಮಾಜದ ಎಲ್ಲಾ ವರ್ಗಗಳ ಜನರು ಅಭಿವೃದ್ಧಿ ಹೊಂದಬೇಕೆಂದು ಬಯಸಿದ್ದನು ಮತ್ತು ಬುದ್ಧನ ಅನುಯಾಯಿಯಾಗಿದ್ದನು. ಹೀಗೆ ನೋಡಿದರೆ ಅಂದು ಮೈಸೂರು ಮಹಾರಾಜರನ್ನು ಯಾವುದೋ ಪಟ್ಟಭದ್ರ ಹಿತಾಸಕ್ತಿಗಳು ಹಾದಿತಪ್ಪಿಸಿವೆ ಎಂದು ಕಾಣುತ್ತದೆ ಎಂದಿದ್ದಾರೆ.

ಇಂದು ಶಾಲಾ-ಕಾಲೇಜುಗಳಲ್ಲಿ ಹೇಳಿಕೊಡುವ ಪಾಠಗಳಲ್ಲಿ ಸಹ ಮೈಸೂರಿನ ಬಗ್ಗೆ, ಮಹಿಷಾಸುರನ ಬಗ್ಗೆ ಆಧಾರರಹಿತ ಸುಳ್ಳು ಮಾಹಿತಿಗಳನ್ನು ತುಂಬಲಾಗಿದೆ. ಮಹಿಷ, ಬುದ್ಧ ಮತ್ತು ಅಶೋಕ ಚಕ್ರವರ್ತಿ ಬಗ್ಗೆ ಪಾಲಿ ಶಾಸನಗಳಲ್ಲಿ ಸಿಗುವ ಮಾಹಿತಿಗಳನ್ನು ಭಾಷಾಂತರ ಮಾಡಿದರೆ ಅವರ ಜೀವನದ ಬಗ್ಗೆ ಇನ್ನೂ ಹೆಚ್ಚು ಬೆಳಕು ಚೆಲ್ಲಬಹುದು ಎಂದು ಪ್ರೊ ಭಗವಾನ್ ಹೇಳಿದ್ದಾರೆ.

ಉರಿಲಿಂಗಿ ಪೆಡ್ಡಿ ಮಠದ ಜ್ಞಾನಪ್ರಕಾಶ ಸ್ವಾಮಿ ಮಾತನಾಡಿ, ಮಹಿಷಾಸುರನ ಬಗ್ಗೆ ತಿಳುವಳಿಕೆ ಮೂಡಿಸಲು ಚಾಮುಂಡಿ ಬೆಟ್ಟದ ಮಹಿಷಾಸುರನ ಮೂರ್ತಿಯಿರುವ ಸ್ಥಳದ ಹತ್ತಿರ ಇದೇ 7ರಂದು ಸರಣಿ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಪುರಭವನದ ಡಾ ಬಿ ಆರ್ ಅಂಬೇಡ್ಕರ್ ಮೂರ್ತಿಯ ಸ್ಥಳದಿಂದ ಮೆರವಣಿಗೆ ಹೊರಟು ಚಾಮುಂಡಿ ಬೆಟ್ಟದ ಮೇಲಿರುವ ಮಹಿಷಾಸುರನ ಮೂರ್ತಿ ಬಳಿಗೆ ಹೋಗಲಾಗುವುದು ಎಂದು ಹೇಳಿದರು.

ಮೆರವಣಿಗೆಗೆ ಮಾಜಿ ಸಚಿವ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಚಾಲನೆ ನೀಡಲಿದ್ದಾರೆ. ಮಹಿಷ ಮಂಡಲದ ಮಹಾದೊರೆ ಎಂಬ ಸೆಮಿನಾರ್ ಕೂಡ ನಡೆಯಲಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com