ಬೆಂಗಳೂರು: ನಾಗವಾರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಪ್ರಸ್ತಾವಿತ ಮೆಟ್ರೋ ಮಾರ್ಗ ಹೆಬ್ಬಾಳ ಮೂಲಕ ಸಂಚರಿಸುವಂತೆ ಮರು ಬದಲಾವಣೆ ಆಗುವ ಸಾಧ್ಯತೆ ಇದೆ.
ಈ ಹಿಂದೆ ಪ್ರಸ್ತಾವಿತ ಮಾರ್ಗದಲ್ಲಿ ಬೆಂಗಳೂರು- ಮಂಗಳೂರು ಪೆಟ್ರೋಲಿಯಂ ಪೈಪ್ ಲೈನ್ ಸಾಗಿರುವುದರಿಂದ ಈ ಮಾರ್ಗದಲ್ಲಿ ಯಾವುದೇ ಕಾಮಗಾರಿ ಚಟುವಟಿಕೆ ಕೈಗೊಳ್ಳದಂತೆ ಆದೇಶಿಸಲಾಗಿದ್ದು, ಮಾರ್ಗ ಬದಲಾವಣೆಯನ್ನು ಬಿಎಂಆರ್ ಸಿಎಲ್ ಪರಿಗಣಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ನಾಗವಾರದಿಂದ ಆರಂಭಗೊಳ್ಳಬೇಕಾಗಿದ್ದ ಎರಡನೇ ಬಿ ಹಂತದ ಮೆಟ್ರೋ ರೈಲು ಆರ್ ಕೆ ಹೆಗಡೆ ನಗರ ಮಾರ್ಗವಾಗಿ ಥಣಿಸಂದ್ರ ಮುಖ್ಯರಸ್ತೆ ಸಾಗಿ ನಂತರ ಜಕ್ಕೂರು ಪ್ಲೇಯಿಂಗ್ ಶಾಲೆ, ಬಳ್ಳಾರಿ ಮುಖ್ಯರಸ್ತೆ ಮೂಲಕ ವಿಮಾನ ನಿಲ್ದಾಣ ಸಂಪರ್ಕಿಸುತಿತ್ತು. 5, 950 ಕೋಟಿ ರೂ. ಮೊತ್ತದ ಈ ಯೋಜನೆಗಾಗಿ ಕಳೆದ ವರ್ಷದ ಡಿಸೆಂಬರ್ 11 ರಂದು ಸಚಿವ ಸಂಪುಟದಲ್ಲಿ ಅನುಮೋದನೆ ಕೂಡಾ ದೂರಕಿತ್ತು.
ಆದರೆ, ಹೊಸದಾಗಿ ಪ್ರಸ್ತಾಪಿಸಿರುವಂತೆ ನಾಗವಾರದಿಂದ ಹೊರ ವರ್ತುಲ ರಸ್ತೆ ಮಾರ್ಗವಾಗಿ ಹೆಬ್ಬಾಳಕ್ಕೆ ಸಾಗಿ ನಂತರ ಬಳ್ಳಾರಿ ಮುಖ್ಯರಸ್ತೆ ಬಲಕ್ಕೆ ಜಕ್ಕೂರು ಫ್ಲೇಯಿಂಗ್ ಶಾಲೆ ಮೂಲಕ ವಿಮಾನ ನಿಲ್ದಾಣ ಸಂಪರ್ಕಿಸಬಹುದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
Advertisement