ಕುಮಟಾ: ಮಂಗಳವಾರದಿಂದ ನಾಪತ್ತೆಯಾಗಿದ್ದ ಪುರೋಹಿತರೊಬ್ಬರು ಇಂದು ಶವವಾಗಿ ಪತ್ತೆಯಾಗಿದ್ದಾರೆ.
ಕುಂಬಾಲೇಶ್ವರ್ ದೇವಾಲಯದ ವಿಶ್ವೇಶ್ವರ ಭಟ್ (54) ಮೃತಪಟ್ಟವರು. ಮಂಗಳವಾರ ಪೂಜೆಯ ನೆಪದಲ್ಲಿ ಕೆಲವರು ದ್ವಿಚಕ್ರ ವಾಹನದಲ್ಲಿ ಮೂರೂರುಗೆ ಕರೆದುಕೊಂಡು ಹೋಗಿದ್ದು, ಅಂದು ರಾತ್ರಿಯಿಂದ ಅವರು ವಾಪಾಸ್ ಬಂದಿಲ್ಲ. ಕುಟುಂಬ ಸದಸ್ಯರು ಹುಡುಕಾಟ ನಡೆಸಿದ್ದರೂ ಪುರೋಹಿತರು ಪತ್ತೆಯಾಗಿರಲಿಲ್ಲ.
ಬುಧವಾರ ವಿಶ್ವೇಶ್ವರ ಭಟ್ ಸ್ವಾಮೀಜಿ ಪತ್ನಿ ಸರಸ್ವತಿ ಕುಮಟಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಮಂಗಳವಾರ ಬೆಳಗ್ಗೆ ಒಬ್ಬ ವ್ಯಕ್ತಿ ದ್ವಿಚಕ್ರವಾಹನದಲ್ಲಿ ಮೂರೂರು ಬೆಟ್ಟದ ಕಡೆಗೆ ಪುರೋಹಿತರನ್ನು ಕರೆದುಕೊಂಡು ಹೋಗಿರುವುದನ್ನು ಪತ್ತೆ ಹಚ್ಚಿದ್ದರು. ಭಟ್ ಅವರ ಮೊಬೈಲ್ ಪೋನ್ ಲೊಕೆಷನ್ ಹುಡುಕಾಟ ನಡೆಸಿದಾಗ ಮುರೂರು ಬೆಟ್ಟದಲ್ಲಿರುವುದು ಕಂಡುಬಂದಿತ್ತು. ಆದರೆ, ಪೋನ್ ಸ್ವೀ್ಚ್ ಆಫ್ ಆಗಿತ್ತು.
ಭಟ್ ಅವರನ್ನು ಕೊಂದು ಫಾರ್ಟ್ ಹೌಸ್ ಬಳಿ ಹೂತಿದ್ದ ಮಂಜುನಾಥ್ ಈಶ್ವರ್ ಹೆಗ್ಡೆ ಹಾಗೂ ಹರೀಶ್ ಎಂಬ ಆರೋಪಿಗಳನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ವಿಶ್ವೇಶ್ವರ ಭಟ್ ಕೊಲೆಯಲ್ಲಿ ಈ ಇಬ್ಬರ ಪಾತ್ರ ಇರುವುದು ದೃಢಪಟ್ಟಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಪಾಟೀಲ್ ಹೇಳಿದ್ದು, ಆಸ್ತಿ ವಿವಾದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ತಿಳಿಸಿದ್ದಾರೆ.
Advertisement