ಮಂಗಳೂರು: ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗಡೆಯವರ ಕನಸಿನ ಕೂಸಾಗಿರುವ ಮಂಜೂಷಾ ವಸ್ತುಸಂಗ್ರಹಾಲಯದ ನವೀಕೃತ ಕಟ್ಟಡವನ್ನು ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ಬುಧವಾರ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.
ವಸ್ತುಸಂಗ್ರಹಾಲಯವನ್ನು 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು 1.25 ಲಕ್ಷ ಚದರಡಿ ವಿಸ್ತೀರ್ಣವನ್ನು ಹೊಂದಿದೆ. ಅದರಲ್ಲಿ ಸುಮಾರು 26 ಸಾವಿರ ಪುರಾತನ ವಸ್ತುಗಳಿವೆ. ಇವೆಲ್ಲವೂ ಹೆಗ್ಗಡೆಯವರ ಸಂಗ್ರಹಗಳಾಗಿವೆ. ವಸ್ತು ಸಂಗ್ರಹಾಲಯದಲ್ಲಿ ಐದನೇ ಶತಮಾನದ ಹಸ್ತಪ್ರತಿಗಳು, ಪ್ರಾಚೀನ ಶಿಲಾಯುಗದ ಮತ್ತು ನವಶಿಲಾಯುಗದ ಬಂಡೆಗಳು, 1500ರ ದಶಕದ ಧಾರ್ಮಿಕ ಕಲಾಕೃತಿಗಳು (ಮೂಲ ದೇವಾಲಯದ ರಥ ಸೇರಿದಂತೆ) ಮತ್ತು ಕಳೆದ ಶತಮಾನದ ಕ್ಯಾಮೆರಾಗಳು ಕೂಡ ಇವೆ. ಕರಾವಳಿ ಭಾಗದ ಇತ್ತೀಚಿನ ಐತಿಹಾಸಿಕ ಕಲಾಕೃತಿಗಳು ಕೂಡ ಸೇರಿವೆ.
ಈ ಬಗ್ಗೆ ಧರ್ಮಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಡಾ ಡಿ ವೀರೇಂದ್ರ ಹೆಗ್ಗಡೆ, ಇಂದಿನ ಬಳಕೆ ಮತ್ತು ಬಿಸಾಕುವ ಸಂಸ್ಕೃತಿಯ ಮಧ್ಯೆ ಭಾರತ ಹಾಗೂ ವಿದೇಶಗಳ ಐತಿಹಾಸಿಕ ಮತ್ತು ಸಾಂಸ್ಕೃತಿಕ ಕಲಾವಸ್ತುಗಳ ಸಂಗ್ರಹ ಮುಂದಿನ ಪೀಳಿಗೆಗೆ ಅತ್ಯಮೂಲ್ಯವಾಗಿದೆ ಎಂದರು.
ನವೆಂಬರ್ 2ನೇ ವಾರದಿಂದ ವರ್ಷವಿಡೀ ಎಲ್ಲಾ ದಿನಗಳು ಈ ಸಂಗ್ರಹಾಲಯ ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತದೆ. ಪ್ರವೇಶ ಶುಲ್ಕ 10 ರೂಪಾಯಿಗಳಾಗಿವೆ.12 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದೆ.
Advertisement