ಬೆಂಗಳೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡದಿರುವ ನಿರ್ಧಾರಕ್ಕೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಅವರು, ಉದ್ಯಾನದೊಳಗೆ ಎಲೆವೇಟೆಡ್ ರಸ್ತೆ ನಿರ್ಮಿಸುವ ಮತ್ತು ರಾತ್ರಿ ವೇಳೆ ಸಂಚಾರಕ್ಕೆ ಅನುವು ಮಾಡಿಕೊಡುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ತಮ್ಮ ವಿರೋಧವಿದ್ದು, ರಾಜ್ಯ ಸರ್ಕಾರ ಈ ನಡೆಯನ್ನು ವಿರೋಧಿಸುತ್ತದೆ ಎಂದಿದ್ದಾರೆ.
ನಮ್ಮ ಪರಿಸರತಜ್ಞರು ಮತ್ತು ಪ್ರಕೃತಿ ರಕ್ಷಣೆ ಕಾರ್ಯಕರ್ತರು ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಉದ್ಯಾನವನದಲ್ಲಿ ಉದ್ದೇಶಿತ ಮೇಲ್ಸೇತುವೆಯನ್ನು ಕೂಡ ನಮ್ಮ ಸರ್ಕಾರ ವಿರೋಧಿಸುತ್ತದೆ. ಪ್ರಕೃತಿ ರಕ್ಷಣೆ ನಮ್ಮ ಕರ್ತವ್ಯವಾಗಿದೆ. ಬಂಡೀಪುರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 212ರ ಮೂಲಕ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಮತ್ತು 1 ಕಿಲೋ ಮೀಟರ್ ಉದ್ದದ 4 ಎಲೆವೇಟೆಡ್ ಕಾರಿಡಾರ್ ಗಳನ್ನು ನಿರ್ಮಿಸಬೇಕೆಂದು ರಾಷ್ಟ್ರೀಯ ಸಂಚಾರ ಮತ್ತು ಹೆದ್ದಾರಿ ಸಚಿವಾಲಯ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
Our environmentalists&pro-nature activists are protesting against d central govt suggestion to allow night traffic at Bandipur National Park.I promise that our govt will oppose d proposed flyover at the park.We are for conserving nature.Our committment to protect Bandipur remains
— CM of Karnataka (@CMofKarnataka) October 29, 2018
Advertisement