ಬೆಂಗಳೂರು: ಕೈಗಾರಿಕಾ ವಲಯದಲ್ಲಿ ಉತ್ಪಾದನಾ ಸಾಮರ್ಥ್ಯ ವೃದ್ಧಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್ನಲ್ಲಿ ಘೋಷಿಸಿದ್ದ "ಚೀನಾ ದೇಶದೊಂದಿಗೆ ಸ್ಪರ್ಧೆ' ಯೋಜನೆಯಡಿ ರಾಜ್ಯದ ವಿವಿಧೆಡೆ ಒಂಬತ್ತು ಕೈಗಾರಿಕಾ ಕ್ಲಸ್ಟರ್ಗಳನ್ನು ಸ್ಥಾಪಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದ್ದು, ಸೌರಶಕ್ತಿ, ವಸ್ತುಗಳು, ಎಲೆಕ್ಟ್ರಿಕ್ ಲೈಟಿಂಗ್ ವಸ್ತುಗಳು, ಸ್ನಾನಗೃಹ ವಸ್ತುಗಳು, ಎಲೆಕ್ಟ್ರಿಕ್ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಆಟಿಕೆಗಳ ಉತ್ಪಾದನಾ ಕ್ಲಸ್ಟರ್ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಕಲಬುರ್ಗಿ , ಚಿತ್ರದುರ್ಗ ಜಿಲ್ಲೆಯಲ್ಲಿ, ಕೊಪ್ಪಳ ಮೈಸೂರು, ಬಳ್ಳಾರಿ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಬೀದರ್ಗಳಲ್ಲಿ ಒಟ್ಟು ಒಂಬತ್ತು ಕೈಗಾರಿಕಾ ಕ್ಲಸ್ಟರ್ಗಳನ್ನು ಸ್ಥಾಪಿಸಲಾಗುತ್ತದೆ.
ಸಂಪುಟ ಸಭೆ ಬಳಿಕ ಈ ಕುರಿತು ವಿವರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ, ಇದಕ್ಕೆ ಪೂರಕವಾಗಿ ವಿಷನ್ ಗ್ರೂಪ್ ರಚಿಸಲು ಮತ್ತು ಸಂಬಂಧಿಸಿದ ಉದ್ಯಮಗಳಿಗೆ ಬೇಕಾದ ಕೌಶಲ್ಯಭರಿತ ನೌಕರರನ್ನು ಸೃಷ್ಟಿಸುವ ಉದ್ದೇಶದಿಂದ 500 ಕೋಟಿ ರೂ. ವೆಚ್ಚದಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಕೂಡ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದರು.
ಸೆಮಿ ಕಂಡಕ್ಟರ್ ಅಸೋಸಿಯೇಷನ್ ಜತೆ ಒಪ್ಪಂದ ಮಾಡಿಕೊಂಡು 51 ಕೋಟಿ ರೂ. ವೆಚ್ಚದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಐದು ವರ್ಷದ ಅವಧಿಗೆ ಸರ್ಕಾರದಿಂದ 21.53 ಕೋಟಿ ರೂ. ಮಂಜೂರು ಮಾಡಲು ಸಮ್ಮತಿಸಲಾಗಿದೆ.