ಬೆಂಗಳೂರು: ಎಲ್ಲಾ ರಾಜ್ಯ ಸರ್ಕಾರಿ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಗಳಿಂದ ಸರ್ಕಾರದ ನಾಮ ನಿರ್ದೇಶನವನ್ನು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಹಿಂತೆಗೆದುಕೊಂಡು ಎರಡು ತಿಂಗಳಾದವು. ಆದರೆ ಹೊಸ ನಾಮ ನಿರ್ದೇಶನ ಇನ್ನೂ ಹೊರಡಿಸಿಲ್ಲ.
ರಾಜ್ಯ ಉನ್ನತ ಶಿಕ್ಷಣ ಇಲಾಖೆ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರ ಹುದ್ದೆಗೆ ಸುಮಾರು 3 ಸಾವಿರ ಅರ್ಜಿಗಳು ಬಂದಿದ್ದು ಯಾವುದೇ ವ್ಯಕ್ತಿ ಅನರ್ಹ ಎಂದು ಕಂಡುಬಂದರೆ ಅವರನ್ನು ನಾಮ ನಿರ್ದೇಶನ ಮಾಡುವುದಿಲ್ಲ. ಸಿಂಡಿಕೇಟ್ ಸದಸ್ಯರ ಹುದ್ದೆ ನೇಮಕಕ್ಕೆ ಲಾಬಿ ಮತ್ತು ಒತ್ತಡ ಸಾಕಷ್ಟು ನಡೆಯುತ್ತಿದೆ. ಆದರೆ ಇದರಲ್ಲಿ ಯಾವುದೇ ರಾಜಕೀಯ ಪ್ರಭಾವ ಬೀರುವುದಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ವ್ಯಕ್ತಿ ಯಾವ ಪಕ್ಷಕ್ಕೆ ಸೇರಿದವನು ಎಂದು ನಾನು ನೋಡುವುದಿಲ್ಲ, ಅವರು ಸಿಂಡಿಕೇಟ್ ಸದಸ್ಯರ ಹುದ್ದೆಗೆ ಅರ್ಹನಾಗಿರಬೇಕಷ್ಟೆ ಎಂದು ಜಿ ಟಿ ದೇವೇಗೌಡ ಹೇಳಿದ್ದಾರೆ.
ಹಿಂದಿನ ಸರ್ಕಾರ ಮಾಡಿದ್ದ ನಾಮ ನಿರ್ದೇಶನವನ್ನು ಈಗಿನ ಸರ್ಕಾರ ಹಿಂತೆಗೆದುಕೊಂಡಿದ್ದರಿಂದ ಕೆಲವು ವಿಶ್ವವಿದ್ಯಾಲಯಗಳು ಸಿಂಡಿಕೇಟ್ ಸಭೆಗಳನ್ನು ನಡೆಸಲು ತೊಂದರೆ ಅನುಭವಿಸುತ್ತಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ದೇವೇಗೌಡ ಎಲ್ಲಾ ವಿಶ್ವವಿದ್ಯಾಲಯಗಳಿಗೂ ಅಕ್ಟೋಬರ್ 15ರೊಳಗೆ ನೇಮಕಾತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
Advertisement