ಹೊಸ ವರ್ಷಾಚರಣೆ ಹಿನ್ನೆಲೆ: ಬೆಂಗಳೂರು ನಗರಾದ್ಯಂತ ಬಿಗಿ ಭದ್ರತೆ; ರಾತ್ರಿ ಮೇಲ್ಸೇತುವೆ ಬಂದ್‌

 ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ. 31ರಂದು ಬೆಳಿಗ್ಗೆ 8  ಗಂಟೆಯಿಂದಲೇ ನಗರದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ  ಎನ್ ಭಾಸ್ಕರ್ ರಾವ್ ತಿಳಿಸಿದ್ದಾರೆ. 
ನಗರ ಪೊಲೀಸ್ ಆಯುಕ್ತ  ಎನ್ ಭಾಸ್ಕರ್ ರಾವ್
ನಗರ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್

ಬೆಂಗಳೂರು:  ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ. 31ರಂದು ಬೆಳಿಗ್ಗೆ 8  ಗಂಟೆಯಿಂದಲೇ ನಗರದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ  ಎನ್ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ನಗರದಲ್ಲಿ 11 ಡಿಸಿಪಿ, 70 ಎಸಿಪಿ, 230 ಇನ್ಸ್‌ಪೆಕ್ಟರ್ ಗಳು, 7  ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಎರಡು ಪಾಳಿಯಲ್ಲಿ  ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. 

ನಗರದಲ್ಲಿ 270 ಹೊಯ್ಸಳ ಪೊಲೀಸ್​ ವಾಹನಗಳ ಸೌಲಭ್ಯವಿದ್ದು, ಸೂಕ್ಷ್ಮ ಹಾಗೂ ಪ್ರಮುಖ ಪ್ರದೇಶಗಳಾದ ಬ್ರಿಗೇಡ್ ರಸ್ತೆ, ಎಂಜಿ.ರೋಡ್ , ಇಂದಿರಾನಗರ, ಕೋರಮಂಗಲದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗುತ್ತದೆ ಎಂದರು.

 ನಗರದಲ್ಲಿ  1500 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಮಂಗಳೂರು ಗಲಭೆ ಸಂದರ್ಭದಲ್ಲಿ  ಕ್ಯಾಮೆರಾಗಳನ್ನು ಹಾನಿಗೊಳಿಸಲಾಗಿತ್ತು. ಹೀಗಾಗಿ ಈ ಬಾರಿ ಹೆಚ್ಚು ಹಿಡನ್ ಕ್ಯಾಮೆರಾ  ಅಳವಡಿಸಲಾಗುವುದು, ಶ್ವಾನ ದಳವನ್ನು ಕೂಡ ಬಳಸಲಾಗುವುದು ಎಂದು ತಿಳಿಸಿದರು. 
 
ಡಿಸೆಂಬರ್ 31 ರ ರಾತ್ರಿ 10 ಗಂಟೆಯಿಂದ ನಗರದ ಎಲ್ಲಾ ಫ್ಲೈ ಓವರ್​​ಗಳು ಬಂದ್ ಆಗಲಿವೆ. ಅತೀ ವೇಗದ  ಸಂಚಾರ ಹಿನ್ನೆಲೆಯಲ್ಲಿ ಏರ್ ಪೋರ್ಟ್ ಫ್ಲೈ ಓವರ್ ಕೂಡ ಬಂದ್ ಆಗಲಿದ್ದು, ಕೆ.ಆರ್.ಪುರಂ  ಫ್ಲೈ ಓವರ್ ಕೆಳಗಡೆ ವಾಹನ ಸಂಚಾರಕ್ಕೆ ಅವಕಾಶವಿಲ್ಲದ ಕಾರಣ ಮೇಲ್ಸೇತುವೆ ಬಂದ್  ಮಾಡುತ್ತಿಲ್ಲ ಎಂದರು.

ಈ ಬಾರಿ  ಖಾಸಗಿ ಭದ್ರತಾ ಸಿಬ್ಬಂದಿಯನ್ನು ಭದ್ರತೆಗೆ ತೆಗೆದುಕೊಳ್ಳುತ್ತೇವೆ. ಬಿಎಂಟಿಸಿ ಹಾಗೂ  ಮೆಟ್ರೋ ವ್ಯವಸ್ಥೆ 2 ಗಂಟೆವರೆಗೂ ಸಂಚಾರ ಇರುತ್ತದೆ. ಅಲ್ಲದೇ,  ಬಾರ್, ರೆಸ್ಟೋರೆಂಟ್  ಗಳು, ಪಬ್ ಹೋಟೆಲ್​​​ಗಳು ಮಧ್ಯರಾತ್ರಿ ಎರಡು ಗಂಟೆಯ ತನಕ ಅವಧಿ ವಿಸ್ತರಣೆ  ಮಾಡಲಾಗುತ್ತದೆ ಎಂದರು.

ಹೆಚ್ಚಿನ  ಭದ್ರತೆಗಾಗಿ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಅಲ್ಲದೇ, ಆಯ್ದ  ಭಾಗಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಪ್ರಯಾಣಿಕರ  ಬಳಿ ವಾಹನ ಚಾಲಕರು ಹೆಚ್ಚು ಹಣಕ್ಕೆ ಬೇಡಿಕೆ ಇಡುವಂತಿಲ್ಲ ಎಂದು ಚಾಲಕರಿಗೆ ಎಚ್ಚರಿಸಿ,  ಹೆಚ್ಚು ಹಣ ಕೇಳಿದರೆ, ವಾಹನದ ನಂಬರ್ ನೋಟ್ ಮಾಡಿಕೊಂಡು ಕಂಟ್ರೋಲ್ ರೂಮ್ ಗೆ ದೂರು  ಸಲ್ಲಿಸಿ ಎಂದು ಸಾರ್ವಜನಿಕರಿಗೆ ಸೂಚಿಸಿದರು.

ಬೆಂಗಳೂರು ಸಂಚಾರ ವಿಭಾಗ ಜಂಟಿ ಆಯುಕ್ತ ರವಿಕಾಂತೇಗೌಡ ಮಾತನಾಡಿ, ಮದ್ಯ ಸೇವಿಸಿ ವಾಹನ ಚಲಾಯಿಸಿದರೆ   ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ತಿಳಿಸಿದರು.

ಡಿ.  31ರಂದು ರಾತ್ರಿ ಯಾರಾದರೂ ಮದ್ಯ ಕುಡಿದು ವಾಹನ ಚಲಾಯಿಸಿದರೆ ಅವರ ವಿರುದ್ಧ ಕ್ರಿಮಿನಲ್  ಕೇಸ್ ದಾಖಲಿಸಲಾವುದು, ಈ ಬಗ್ಗೆ ಸಂಚಾರಿ ಪೊಲೀಸರು ತೀರ್ಮಾನಿಸಿದ್ದಾರೆ. ಹೀಗಾಗಿ ಅಂದು  ಕುಡಿದು ವಾಹನ ಚಲಾಯಿಸಬೇಡಿ. ಚಲಾಯಿಸಿ ಸಿಕ್ಕಿಬಿದ್ದರೆ ನಿರ್ಲಕ್ಷ್ಯ ಆರೋಪದಡಿ  ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಹೊಸ ವರ್ಷಾಚರಣೆಗೆ ಈ ಬಾರಿ 175 ಸ್ಥಳಗಳಲ್ಲಿ  ಮದ್ಯ ತಪಾಸಣೆ ನಡೆಸಲಾಗುವುದು. ಕುಡಿದು ಹೆಣ್ಣು ಮಕ್ಕಳ ಮೇಲೆ ಬೀಳುವುದನ್ನೆಲ್ಲಾ  ಸಹಿಸುವುದಿಲ್ಲ. ಅಂತಹವರನ್ನು ಕೂಡಲೇ ವಶಕ್ಕೆ ಪಡೆಯುತ್ತೇವೆ ಎಂದರು. 

ಡ್ರಗ್ಸ್  ಹಾಗೂ ಮಾದಕ ವಸ್ತುಗಳ‌ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ನಗರದ ಪತ್ರಿಷ್ಠಿತ  ಹೋಟೆಲ್ ಗಳಲ್ಲಿ ಶ್ವಾನ ದಳ ಮುಖಾಂತರ ಪರಿಶೀಲನೆ ಮಾಡಲಾಗುವುದು ಎಂದರು. 

ಯಾರೇ  ಅಪರಿಚಿತ ವ್ಯಕ್ತಿ ಏನೇ ಕೊಟ್ಟರೂ ತೆಗೆದುಕೊಳ್ಳಬೇಡಿ. ಹೋಟೆಲ್​​​ ನಲ್ಲಿ ಜ್ಯೂಸ್,  ಡ್ರಿಂಕ್ಸ್ ನಲ್ಲಿ ಮತ್ತು ಬರುವ ಅಂಶವನ್ನು ಬೆರೆಸಲಾಗುತ್ತದೆ. ಹೀಗಾಗಿ ಸಾರ್ವಜನಿಕರು  ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು.

ಓಲಾ,  ಉಬರ್ ಚಾಲಕರಿಗೂ ಸಹ ಪೊಲೀಸ್​ ಆಯುಕ್ತರು ಎಚ್ಚರಿಕೆ ನೀಡಿದರು. ಓಲಾ, ಉಬರ್​​ ಚಾಲಕರು  ಕುಡಿದು ಚಾಲನೆ ಮಾಡಬೇಡಿ. ಯಾವ ಚಾಲಕರೂ ಸಹ ಒಬ್ಬರೇ ಮಹಿಳೆಯರು ಹೋಗುತ್ತಿದ್ದರೆ,  ಅವರನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಒಂದು ವೇಳೆ ಹೀಗೆ ಮಾಡಿದರೆ ಕಂಪನಿಗಳು‌ ಮತ್ತು  ಚಾಲಕರ ವಿರುದ್ಧ ಸಹ ಕ್ರಮ ಕೈಗೊಳ್ಳಲಾಗುತ್ತದೆ.  ಎಲ್ಲೇ ಮಾದಕ ವಸ್ತುಗಳನ್ನು  ಇಟ್ಟಿದ್ದರೂ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com