ನಾನು ಯಾವುದೇ ಧರ್ಮದ ಪ್ರಚಾರಕನಲ್ಲ, ಮಾನವ ಧರ್ಮದ ಸೇವಕ: ಸಿಎಂ ಕುಮಾರಸ್ವಾಮಿ

ತಾವು ಯಾವುದೇ ಧರ್ಮ ಪ್ರಚಾರಕ ಅಥವಾ ಧರ್ಮ ರಕ್ಷಕನಲ್ಲ, ನಾನಿಲ್ಲಿ ಮಾನವೀಯತೆಯ ಸೇವೆ ಮಾಡುವವನು
ಕುಂಭ ಮೇಳದ ದೃಶ್ಯ
ಕುಂಭ ಮೇಳದ ದೃಶ್ಯ

ಮೈಸೂರು: ತಾವು ಯಾವುದೇ ಧರ್ಮ ಪ್ರಚಾರಕ ಅಥವಾ ಧರ್ಮ ರಕ್ಷಕನಲ್ಲ, ನಾನಿಲ್ಲಿ ಮಾನವೀಯತೆಯ ಸೇವೆ ಮಾಡುವವನು ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಅವರು ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ ಕುಂಭ ಮೇಳದಲ್ಲಿ ಭಾಗವಹಿಸಿ ಮಾತನಾಡಿ, ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡುವುದು ಭಾರತೀಯ ಸಂಸ್ಕೃತಿ. ಭಾರತೀಯ ಸಂಸ್ಕೃತಿ ವಿಶಿಷ್ಟವಾಗಿದ್ದು ಅದರ ಬೇರನ್ನು ಬೇರೆ ದೇಶಗಳಿಗೆ ಕೂಡ ಹರಡುತ್ತಿದೆ ಎಂದರು.

ಆದಿಚುಂಚನಗರಿರಿ ಮಠದ ಅಂದಿನ ಬಾಲಗಂಗಾಧರ ನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮೊದಲಾದವರು ನರಸೀಪುರದಲ್ಲಿ 1989ರಲ್ಲಿ ಕುಂಭ ಮೇಳವನ್ನು ಆರಂಭಿಸಿದ್ದರಿಂದ ಇಂದು ದಕ್ಷಿಣ ಭಾರತ ರಾಜ್ಯಗಳಲ್ಲಿ ಪ್ರಖ್ಯಾತವಾಗಿದೆ. ಎಲ್ಲರಿಗೂ ಉತ್ತರ ಪ್ರದೇಶದ ಪ್ರಯಾಗಕ್ಕೆ ಕುಂಭ ಮೇಳಕ್ಕೆ ಹೋಗಲು ಸಾಧ್ಯವಾಗುವುದಿಲ್ಲ, ಅಂತವರಿಗೆ ನಮ್ಮ ರಾಜ್ಯದ ಮೈಸೂರು ಜಿಲ್ಲೆಯಲ್ಲಿ ನಡೆಯುವ ಕುಂಭ ಮೇಳ ಸಹಕಾರಿಯಾಗಬಹುದು ಎಂದರು.

ಇತ್ತೀಚೆಗೆ ಅನೈತಿಕ ಚಟುವಟಿಕೆಗಳು ಮತ್ತು ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿದ ಸಿಎಂ, ಇಂತಹ ಸಂಪ್ರದಾಯಗಳು ಮತ್ತು ಆಚರಣೆಗಳು ಯುವಕರ ಮನಸ್ಸಿನಲ್ಲಿ ಒಳ್ಳೆಯ ಅಂಶಗಳನ್ನು ಬಿತ್ತಬಲ್ಲದು ಎಂದರು.

ಪ್ರತಿ ಮೂರು ವರ್ಷಕ್ಕೊಮ್ಮೆ ನರಸೀಪುರ ತಾಲ್ಲೂಕಿನಲ್ಲಿ ನಡೆಯುವ ಕುಂಭ ಮೇಳವನ್ನು ಇನ್ನಷ್ಟು ಜನಪ್ರಿಯಗೊಳಿಸಲು, ಉತ್ತಮ ಸೌಕರ್ಯ ಕಲ್ಪಿಸಲು ಸರ್ಕಾರದಿಂದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದರು.

ಮೈಸೂರು ಜಿಲ್ಲಾಡಳಿತ ಕುಂಭ ಮೇಳದಲ್ಲಿ ಪುಣ್ಯ ಸ್ನಾನ ಮಾಡುವ ಗಣ್ಯರಿಗೆ ಮತ್ತು ಧಾರ್ಮಿಕ ಮುಖಂಡರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದರೂ ಸಹ ಮುಖ್ಯಮಂತ್ರಿ ಕುಮಾರಸ್ವಾಮಿ ಕುಂಭ ಸ್ನಾನ ಮಾಡಲಿಲ್ಲ. ಪೂಜೆ ಸಲ್ಲಿಸಿ ನಾಡಿನ ಒಳಿತಿಗೆ ಪ್ರಾರ್ಥಿಸಿದರು.
ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ, ಶಾಸಕರು ಮತ್ತು ಕೆಲವು ಮಠದ ಶ್ರೀಗಳು ಪುಣ್ಯಸ್ನಾನದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಜಿ ಟಿ ದೇವೇಗೌಡ, ಮುಂದಿನ ಐದು ವರ್ಷಗಳವರೆಗೆ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com