ಬೆಂಗಳೂರು; ಶಿಕ್ಷಣ ಸಂಸ್ಥೆಗಳು ಅದರಲ್ಲೂ ಮುಖ್ಯವಾಗಿ ಖಾಸಗಿ ಶಾಲೆಗಳು ಅಲ್ಲಿನ ಶುಲ್ಕ ವಿವರಗಳನ್ನು ಹೊಂದಿದ ಫಲಕವನ್ನು ಪ್ರದರ್ಶಿಸಬೇಕೆಂದು ಹೊರಡಿಸಿರುವ ಸುತ್ತೋಲೆಯನ್ನು ಜಾರಿಗೆ ತಾರದಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ರಾಜ್ಯ ಹೈಕೋರ್ಟ್ ಮುಂದಿನ ವಿಚಾರಣೆಯ ದಿನಾಂಕದೊಳಗೆ ಅಗತ್ಯ ಆದೇಶವನ್ನು ಪಾಲಿಸದಿದ್ದಲ್ಲಿ ಶಿಕ್ಷಣ ಇಲಾಖೆ ಆಯುಕ್ತರು ಖುದ್ದಾಗಿ ನ್ಯಾಯಾಲಯದ ಮುಂದೆ ಹಾಜರಾಗಬೇಕೆಂದು ಆದೇಶ ಹೊರಡಿಸಿದೆ.
ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠಕ್ಕೆ ಮಾಹಿತಿ ನೀಡಿದ ಸರ್ಕಾರಿ ಪರ ವಕೀಲ, 2015ರ ಏಪ್ರಿಲ್ 13ರಂದು ಹೊರಡಿಸಿದ ಸುತ್ತೋಲೆಯನ್ನು 2,129 ಶಾಲೆಗಳು ಇನ್ನು ಕೂಡ ಜಾರಿಗೆ ತಂದಿಲ್ಲ. ಇಲಾಖೆ ತನ್ನ ಸುತ್ತೋಲೆಯನ್ನೇ ಜಾರಿಗೆ ತರುವಲ್ಲಿ ಏಕೆ ವಿಫಲವಾಗಿದೆ ಎಂದು ನ್ಯಾಯಾಧೀಶರು ಪ್ರಶ್ನಿಸಿದರು.
ಮುಂದಿನ ವಿಚಾರಣೆಯ ದಿನಾಂಕದ ವೇಳೆ ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೆ ಬಾರದಿದ್ದರೆ ಶಿಕ್ಷಣ ಇಲಾಖೆ ಆಯುಕ್ತರು ಖುದ್ದಾಗಿ ನ್ಯಾಯಾಲಯದ ಮುಂದೆ ಹಾಜರಾಗಿ ಕಾರಣ ನೀಡಬೇಕು ಎಂದು ಹೇಳಿ ಮುಂದಿನ ವಿಚಾರಣೆಯನ್ನು ಜನವರಿ 23ಕ್ಕೆ ಮುಂದೂಡಿದರು.
ಎಲ್ಲಾ ಶಾಲೆಗಳು ಸುತ್ತೋಲೆಯನ್ನು ಜಾರಿಗೆ ತರಬೇಕೆಂದು ಅಡ್ವೊಕೇಟ್ ಎನ್ ಪಿ ಅಮೃತೇಶ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 2015-16ರಿಂದ ರಾಜ್ಯದ ಎಲ್ಲಾ ಖಾಸಗಿ ಶಾಲೆಗಳು ತಮ್ಮ ಶಾಲೆಯಲ್ಲಿನ ಶುಲ್ಕ ವಿವರ, ಸೀಟುಗಳ ಲಭ್ಯತೆಗಳನ್ನು ಪ್ರದರ್ಶಿಸಬೇಕೆಂದು ಆದೇಶ ನೀಡಲಾಗಿತ್ತು.
Advertisement