ಬೆಂಗಳೂರು: ನೈಸ್ ರಸ್ತೆಯ ಸುತ್ತಮುತ್ತಲ ನಿವಾಸಿಗಳಿಗೆ ಆನೆಗಳ ಹಿಂಡು ಇದೀಗ ತೀವ್ರ ತಲೆನೋವಾಗಿದೆ. ಕೆಂಗೇರಿ ಸಮೀಪ ನೈಸ್ ರಸ್ತೆಯಲ್ಲಿ ನಿನ್ನೆ ಮೂರು ಹೆಣ್ಣು ಮತ್ತು ಒಂದು ಗಂಡು ಆನೆಗಳ ಗುಂಪು ಕಂಡುಬಂದಿದ್ದವು. ಅರಣ್ಯ ನಾಶ, ಕಾರಿಡಾರ್ ಗಳ ಕಣ್ಮರೆ, ವನ್ಯಮೃಗಗಳ ಆವಾಸಸ್ಥಾನನಗಳು, ಆನೆಗಳ ವಾಸಸ್ಥಾನಗಳ ಕಣ್ಮರೆಯಾಗುತ್ತಿರುವುದರಿಂದ ಬೆಂಗಳೂರು ಹೊರವಲಯಗಳಿಂದ ಆನೆಗಳು ಹಿಂಡು ಹಿಂಡಾಗಿ ನಗರದತ್ತ ಬರುತ್ತಿವೆ.
ತಾವು ಓಡಾಡುವ ರಸ್ತೆಯಲ್ಲಿ ಆನೆಗಳನ್ನು ಕಂಡು ಜನರು ಭೀತರಾಗಿ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಉಪ ಸಂರಕ್ಷಣಾಧಿಕಾರಿ ಪ್ರಶಾಂತ್, ಜನರು ಆತಂಕಪಡುವ ಅಗತ್ಯವಿಲ್ಲ. ಸಂಜೆ ಹೊತ್ತಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದತ್ತ ಬರುತ್ತವೆ. ಕಗ್ಗಲಿಪುರ ಅರಣ್ಯವಲಯ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಿಬ್ಬಂದಿ ಪರಿಸ್ಥಿತಿಯ ನಿಗಾವಹಿಸುತ್ತಿದ್ದಾರೆ ಎಂದರು.
ನೈಸ್ ರಸ್ತೆಯಲ್ಲಿ ಆನೆಗಳ ಹಿಂಡು ಸಮಸ್ಯೆಯಲ್ಲ. ರಾಗಿಹಳ್ಳಿ ರಸ್ತೆಯಲ್ಲಿ ಸಮಸ್ಯೆಯಾಗುತ್ತಿದೆ. ಕಳೆದ ಕೆಲ ವಾರಗಳಿಂದ ಒಂದೇ ಒಂದು ಆನೆ ರಾಗಿಹಳ್ಳಿ ರಸ್ತೆಯಲ್ಲಿ ತೊಂದರೆಯುಂಟಮಾಡುತ್ತಿದೆ. ಕಳೆದ ಡಿಸೆಂಬರ್ 29ರಂದು ಸ್ಥಳೀಯ ರವಿ ನಾಯಕ್ ಆನೆ ದಾಳಿಯಿಂದ ತೀವ್ರ ಗಾಯಗೊಂಡಿದ್ದರು. ಅರಣ್ಯಾಧಿಕಾರಿಗಳು ಈ ಆನೆಯ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ.
Advertisement