ಸುಳ್ವಾಡಿ, ಯಾದಗಿರಿ ಬಳಿಕ ಮತ್ತೊಂದು ದುರಂತ! ವಿಷ ಹಾಕಿದ್ದ ಕಾಫಿ ಸೇವಿಸಿ ತಾಯಿ-ಮಗಳು ದುರ್ಮರಣ

ಸುಳ್ವಾಡಿ ವಿಷ ಪ್ರಸಾದ, ಯಾದಗಿರಿಯ ವಿಷದ ನೀರಿನ ದುರಂತ ಮಾಸುವ ಮುನ್ನವೇ ರಾಜ್ಯದಲ್ಲಿ ಇನ್ನೊಂದು ಅಂತಹುದೇ ಘಟನೆ ನಡೆದಿದೆ. ವಿಷ ಬೆರೆತ ಕಾಫಿ ಸೇವನೆ ಮಾಡಿ ......
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚಿಕ್ಕಬಳ್ಳಾಪುರ: ಸುಳ್ವಾಡಿ ವಿಷ ಪ್ರಸಾದ, ಯಾದಗಿರಿಯ ವಿಷದ ನೀರಿನ ದುರಂತ ಮಾಸುವ ಮುನ್ನವೇ ರಾಜ್ಯದಲ್ಲಿ ಇನ್ನೊಂದು ಅಂತಹುದೇ ಘಟನೆ ನಡೆದಿದೆ. ವಿಷ ಬೆರೆತ ಕಾಫಿ ಸೇವನೆ ಮಾಡಿ ತಾಯಿ, ಮಗಳು ಮೃತಪಟ್ಟಿರುವ ಘಟನೆ ಚಿಕ್ಕಬಳ್ಲಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿ ನಡೆದಿದೆ.
 ಬಾಗೇಪಲ್ಲಿ ತಾಲೂಕಿನ ಬತ್ತಲಹಳ್ಳಿ ಗ್ರಾಮದ ಅಕ್ಕಲಮ್ಮ(80) ಮತ್ತು ನರಸಮ್ಮ(60) ಕಾಫಿ ಕುಡಿದು ಸಾವನ್ನಪ್ಪಿದ ದುರ್ದೈವಿಗಳು.ಇದೇ ವೇಳೆ ಕಾಫಿ ಸೇವನೆ ಮಾಡಿದ್ದ ಮ್ಮೊಮ್ಮಕ್ಕಳಾದ ಅರ್ಜುನ್ (7) ,ಆರತಿ(4) ಜೀವಭಯದಿಂದ ಪಾರಾಗಿದ್ದಾರೆ.
ಚಿಂತಾಮಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಕ್ಕಲಮ್ಮಮತ್ತು ನರಸಮ್ಮ ಚಿಕಿತ್ಸೆ ಫಲ ನೀಡದೆ ಸಾವನ್ನಪ್ಪಿದ್ದಾರೆ. 
ಇವರು ತಮ್ಮ ಗ್ರಾಮದ ಅಂಗಡಿಯೊಂದರಿಂದ ಕಾಫಿಪುಡಿ ಖರೀದಿಸಿದ್ದರು.ಶನಿವಾರ ಬೆಳಿಗ್ಗೆ ಎಲ್ಲರೂ ಕಾಫಿ ತಯಾರಿಸಿ ಸೇವಿಸಿದ್ದಾರೆ.ಇದಾಗಿ ತುಸು ಸಮಯಕ್ಕೆ ಎಲ್ಲರಿಗೆ ವಾಂತಿಯಾಗಿದೆ. ಎಲ್ಲರೂ ಅಸ್ವಸ್ಥರಾಗಿದ್ದು ಎಲ್ಲರನ್ನೂ ಚಿಂತಾಮಣಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪರಿಸ್ಥಿತಿ ವಿಷಮಿಸಿದ್ದ ಕಾರಣ ವೈದ್ಯರು ರೋಗಿಗಳನ್ನು ಕೋಲಾರದ ಆಸ್ಪತ್ರೆಗೆ ಸಾಗಿಸಲು ಹೇಳಿದ್ದರು. ಆದರೆ ಅಷ್ಟರಲ್ಲೇ ಅಕ್ಕಲಮ್ಮಮತ್ತು ನರಸಮ್ಮ ಸಾವನ್ನಪ್ಪಿದ್ದರು. ಅದೇ ಕಾಫಿ ಸೇವಿಸಿದ್ದ ಅರ್ಜುನ್ ಹಾಗೂ ಆರತಿ ಅಪಾಯದಿಂದ ಪಾರಾಗಿದ್ದಾರೆ. ಕಾಫಿಯಲ್ಲಿ ವಿಷದ ಅಂಶವಿದೆ ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. 
ಘಟನೆಯಿಂದ ಬತ್ತಲಹಳ್ಳಿ ಗ್ರಾಮಸ್ಥರು ಆತಂಕದಲ್ಲಿದ್ದು ಘಟನೆ ಕುರಿತಂತೆ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com