ರಾಜ್ಯ
ಕೇರಳದಲ್ಲಿ ಮತ್ತೆ ನಿಫಾ ಹಾವಳಿ: ರಾಜ್ಯದಲ್ಲಿ ಸೋಂಕು ತಡೆಗೆ ಆರೋಗ್ಯ ಇಲಾಖೆ ಸುತ್ತೋಲೆ
ರಾಜ್ಯದಲ್ಲಿ ಇಲ್ಲಿಯವರೆಗೆ ಯಾವುದೇ ನಿಫಾ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ. ಆದ್ದರಿಂದ ಸಾರ್ವಜನಿಕರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ರಾಜ್ಯ ಕರ್ನಾಟಕದ ಆರೋಗ್ಯ....
ಬೆಂಗಳೂರು: ರಾಜ್ಯದಲ್ಲಿ ಇಲ್ಲಿಯವರೆಗೆ ಯಾವುದೇ ನಿಫಾ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ. ಆದ್ದರಿಂದ ಸಾರ್ವಜನಿಕರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ರಾಜ್ಯ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಪ್ರಕಟಿಸಿದ್ದು ಸೋಕಿನ ಕುರಿತು ಮುಂಜಾಗ್ರತೆ ವಹಿಸುವಂತೆ ಎಲ್ಲಾ ಜಿಲ್ಲೆಗಳ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.
ನಿಫಾ ಸೋಂಕು (ಎನ್ ಐವಿ) ಪ್ರಾಣಿಗಳು ಹಾಗೂ ಮನುಷ್ಯರಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸೋಂಕು. ಸಾಮಾನ್ಯವಾಗಿ ಬಾವಲಿಗಳಿಂದ ಹರಡುತ್ತದೆ. ಬಾವಲಿ ಹಾಗೂ ಹಂದಿಗಳ ನೇರ ಸಂಪರ್ಕದಿಂದ ಹಾಗೂ ಸೋಂಕಿತ ವ್ಯಕ್ತಿಯೊಂದಿಗೆ ನೇರ ಸಂಪರ್ಕ ಹೊಂದುವುದರಿಂದ ಈ ರೋಗ ಹರಡುತ್ತದೆ.
ಕೇರಳದಲ್ಲಿ 23 ವರ್ಷದ ವ್ಯಕ್ತಿಯಲ್ಲಿ ನಿಫಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೂಡ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತ್ತೀಚೆಗೆ ಕೇರಳದಲ್ಲಿ ಆರು ವ್ಯಕ್ತಿಗಳನ್ನು ನಿಫಾ ಸೋಂಕಿನ ಪರೀಕ್ಷೆಗೊಳಪಡಿಸಲಾಗಿದ್ದು, ಅವುಗಳು ನಿಫಾ ವೈರಾಣು ಹೊಂದಿಲ್ಲ ಎಂದು ಪತ್ತೆಯಾಗಿದೆ.
ಚಾಮರಾಜನಗರ, ಮೈಸೂರು, ಕೊಡಗು,ದಕ್ಷಿಣ ಕನ್ನಡ , ಉತ್ತರ ಕನ್ನಡ , ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಿಫಾ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಕಠಿಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ರಾಜ್ಯ ಆರೋಗ್ಯ ಇಲಾಖೆ ಜಿಲ್ಲಾ ಕೇಂದ್ರಗಳಿಗೆ ಸೂಚನೆ ನೀಡಿದೆ.
ಜಿಲ್ಲಾ ಮಟ್ಟದಲ್ಲಿ ಪಶು ಇಲಾಖೆಯನ್ನು ಒಳಗೊಂಡಂತೆ ಅಂತರ ಇಲಾಖೆ ಸಮಿತಿ ಸಭೆ ನಡೆಸಿ ಅಗತ್ಯ ಕ್ರಮಗಳ ಕುರಿತು ಚರ್ಚಿಸಬೇಕು. ಸೋಂಕು ಕಾಣಿಸಿಕೊಂಡ ವ್ಯಕ್ತಿಗಳ ಚಿಕಿತ್ಸೆಗೆ ಎರಡು ಹಾಸಿಗೆಗಳನ್ನು ಪ್ರತ್ಯೇಕವಾಗಿರಿಸಬೇಕು. ತುರ್ತು ನಿಗಾ ಘಟಕ ಹೊಂದಿರುವ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಗಳನ್ನು ಸಿದ್ಧವಾಗಿರಿಸಿಕೊಳ್ಳಬೇಕು. ಎಲ್ಲಾ ಜಿಲ್ಲಾ ಆರೋಗ್ಯ ಕೇಂದ್ರಗಳಿಂದ ಕಡ್ಡಾಯವಾಗಿ ನಿಯಮಿತ ವರದಿ ಸಲ್ಲಿಸಬೇಕು. ಆಶಾ ಕಾರ್ಯಕರ್ತರು ಹಾಗೂ ವೈದ್ಯಕೀಯ ಸಹಾಯಕರಿಗೆ ನಿಫಾ ಸೋಂಕಿನ ಕುರಿತು ಮಾಹಿತಿ ನೀಡಬೇಕು. ಶಂಕಿತ ಸೋಂಕಿನ ಮಾದರಿಗಳನ್ನು ತಪಾಸಣೆಗಾಗಿ ಪುಣೆಯ ಎನ್ ಐ ವಿ ಪ್ರಯೋಗಾಲಯಕ್ಕೆ ಕಳುಹಿಸಬೇಕು ಎಂದು ಇಲಾಖೆ ಸುತ್ತೋಲೆ ಹೊರಡಿಸಿದೆ. .
ಬಿಬಿಎಂಪಿ ಮುನ್ನೆಚ್ಚರಿಕೆ
ಬೆಂಗಳೂರು ನಗರದಲ್ಲಿ ಇಲ್ಲಿಯವರೆಗೆ ಯಾವುದೇ ನಿಫಾ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ. ಆದ್ದರಿಂದ ಸಾರ್ವಜನಿಕರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹಾಪೌರರಾದ ಗಂಗಾಂಬಿಕಾ ಮಲ್ಲಿಕಾರ್ಜುನ್ ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಫಾ ವೈರಾಣು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಗ್ಯಾಧಿಕಾರಿಯೊಂದಿಗೆ ಗುರುವಾರ ಮಾತುಕತೆ ನಡೆಸಿದ ಮೇಯರ್, ಪಾಲಿಕೆಯ ಎಲ್ಲಾ ಆರೋಗ್ಯ ಕೇಂದ್ರ, ಹೆರಿಗೆ ಆಸ್ಪತ್ರೆ, ರೆಫರಲ್ ಆಸ್ಪತ್ರೆಗಳಲ್ಲಿ ಸಹಾಯ ಕೇಂದ್ರ ತೆರೆದು ಸಾರ್ವಜನಿಕರಿಗೆ ಮಾಹಿತಿ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಆದೇಶ ನೀಡಿದರು.
ನಿಫಾ ಸೋಂಕು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಮಾಹಿತಿ ನೀಡಿದೆ.
ಮಾಡಬೇಕಾದ್ದು
- ನಿಫಾ ಸೋಂಕು ಹರಡುವಂತಹ ಹಂದಿ, ಕುದುರೆ, ನಾಯಿ , ಬೆಕ್ಕುಗಳಂತಹ ಪ್ರಾಣಿಗಳನ್ನು ಪ್ರತ್ಯೇಕವಾಗಿರಿಸಿ
- ಸೋಂಕು ಶಂಕಿತ ವ್ಯಕ್ತಿಗಳನ್ನು ಜನರ ಸಂಪರ್ಕದಿಂದ ಪ್ರತ್ಯೇಕವಾಗಿರಿಸಿ
- ಸೋಂಕಿತ ವ್ಯಕ್ತಿಗಳು ಬಳಸುವ ಬಟ್ಟೆ, ಸ್ನಾನದ ಗೃಹ ಹಾಗೂ ಶೌಚಾಲಯಗಳನ್ನು ಪ್ರತ್ಯೇಕವಾಗಿರಿಸಿ, ನಿಯಮಿತವಾಗಿ ಸ್ವಚ್ಚಗೊಳಿಸಿ
- ಸೋಂಕಿತ ವ್ಯಕ್ತಿಗಳೊಂದಿಗೆ ಹಸ್ತ ಲಾಘವ ಮಾಡಬಾರದು. ಒಂದೊಮ್ಮೆ ಮಾಡಿದಲ್ಲಿ ತಮ್ಮ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳಿ
- ರೋಗಿಗಳನ್ನು ಉಪಚರಿಸುವಾಗ ಮುಖಗವಸು(ಮಾಸ್ಕ್) ಹಾಗೂ ಕೈಗವಸು ಕಡ್ಡಾಯವಾಗಿ ಧರಿಸಿ
- ಎಲ್ಲಾ ರೀತಿಯ ಹಣ್ಣುಗಳನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ಅಥವಾ ಬೇಯಿಸಿ ತಿನ್ನಿ
- ಫ್ಲೂ ರೀತಿಯ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ನಡೆಸಿ
- ನೆರವಿಗಾಗಿ ಸಹಾಯವಾಗಿ 104ಕ್ಕೆ ಕರೆ ಮಾಡಿ
ಏನು ಮಾಡಬಾರದು?
- ಪ್ರಾಣಿಗಳು ಹಾಗೂ ಪಕ್ಷಿಗಳು ಕಚ್ಚಿರುವ ಹಣ್ಣನ್ನು ತಿನ್ನಬೇಡಿ
- ಬಾವುಲಿಗಳು ಅತಿ ಹೆಚ್ಚಾಗಿ ಕಂಡು ಬರುವ ಪ್ರದೇಶಗಳಲ್ಲಿ ಸಂಗ್ರಹಿಸಿರುವ ನೀರು ಕುಡಿಯಬೇಡಿ
- ಸೋಂಕಿತ ಪ್ರದೇಶಗಳಿಗೆ ಭೇಟಿ ನೀಡುವಾಗ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ
- ರೋಗಿಯ ಜೊಲ್ಲು, ಬೆವರು, ಮೂತ್ರ ಇತ್ಯಾದಿ ಶರೀರ ಸ್ರಾವದೊಂದಿಗೆ ಸಂಪರ್ಕ ತಪ್ಪಿಸಿ