ಎಸ್ಸಿ, ಎಸ್ಟಿ ಬಡ್ತಿ ಮೀಸಲಾತಿ: ರಾಜ್ಯ ಸರ್ಕಾರದ ಆದೇಶಕ್ಕೆ‌ ಸುಪ್ರೀಂ ತಡೆ

ರಾಜ್ಯ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ವಿವಾದ ಇತ್ಯರ್ಥಪಡಿಸಲು ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ಬಡ್ತಿ ಮೀಸಲಾತಿ ಕುರಿತ ನೂತನ....
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ರಾಜ್ಯ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ವಿವಾದ ಇತ್ಯರ್ಥಪಡಿಸಲು ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ಬಡ್ತಿ ಮೀಸಲಾತಿ ಕುರಿತ ನೂತನ ಕಾಯ್ದೆಗೆ ಆರಂಭದಲ್ಲೇ ಕಾನೂನು ತೊಡಕು ಎದುರಾಗಿದೆ. 
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ತಂದು ರಾಜ್ಯ ಸರ್ಕಾರ ಫೆ.27ರಂದು ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. 
ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಬಿ.ಕೆ.ಪವಿತ್ರ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಪೀಠ, ಈ ತಡೆಯಾಜ್ಞೆ ನೀಡಿದೆ.
ಬಡ್ತಿ ಮೀಸಲಾತಿ ಕಾಯ್ದೆ ಪ್ರಶ್ನಿಸಿ ಅರ್ಜಿದಾರರು ಈ ಹಿಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಅಂತಿಮ ಹಂತದಲ್ಲಿದೆ. ಆದರೆ, ಆ ಕುರಿತ ತೀರ್ಪು ಹೊರಬರುವ ಮುನ್ನವೇ ರಾಜ್ಯ ಸರ್ಕಾರ ನೂತನ ಕಾಯ್ದೆ ಜಾರಿಗೆ ತಂದಿರುವುದು ಸರಿಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ವಿಚಾರಣೆಯನ್ನು ಮಾರ್ಚ್ 6ಕ್ಕೆ ಮುಂದೂಡಲಾಗಿದೆ. 
ಏನಿದು ಪ್ರಕರಣ?
ಮೀಸಲಾತಿ ಅಡಿಯಲ್ಲಿ ಬಡ್ತಿ ಪಡೆದಿರುವ ಪರಿಶಿಷ್ಟ ಜಾತಿ, ಪಂಗಡದ ಸರ್ಕಾರಿ ನೌಕರರಿಗೆ ಸಾಂದರ್ಭಿಕ ಹಿರಿತನ ಒದಗಿಸಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ 2002ರಲ್ಲಿ ‘ಸರ್ಕಾರಿ ನೌಕರರ ಮೀಸಲಾತಿ ಆಧಾರಿತ ಬಡ್ತಿ ನೌಕರರ ಜೇಷ್ಠತೆ ನಿರ್ಣಯ ಕಾಯ್ದೆ’ ರೂಪಿಸಿತ್ತು. ಈ ಕಾಯ್ದೆಯನ್ನು ಪ್ರಶ್ನಿಸಿ ಕೆಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರಕ್ಕೆ ಸಂಬಂಧಿಸಿದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ 2006ರಲ್ಲಿ ಎಲ್ಲ ಅರ್ಜಿಗಳನ್ನು ಹೈಕೋರ್ಟ್ ಗಳಿಗೆ ಮರಳಿಸಿ, ಮರು ವಿಚಾರಣೆ ನಡೆಸುವಂತೆ ಸೂಚಿಸಿತ್ತು. 
ಅದರಂತೆ, ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರದ ಜೇಷ್ಠತಾ ನಿರ್ಣಯವನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಬಿ.ಕೆ.ಪವಿತ್ರಾ ಎಂಬುವರು 2006ರಲ್ಲಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರು. 
ಬಡ್ತಿ ಮೀಸಲಾತಿ ನಿಯಮ ಜಾರಿಗೊಳಿಸುವುದರಿಂದ ಸಾಮಾನ್ಯ ವರ್ಗದವರ ಜೇಷ್ಠತೆಗೆ ಅಡ್ಡಿಯುಂಟಾಗುತ್ತದೆ. ಸಾಮಾನ್ಯ ವರ್ಗದವರು ತಮ್ಮ 56 ನೇ ವಯಸ್ಸಿಗೆ 3ನೇ ಹಂತದ ಜೇಷ್ಠತೆ ಪಡೆದರೆ, ಬಡ್ತಿ ಮೀಸಲಾತಿ ಹೊಂದಿದವರು 45 ನೇ ವಯಸ್ಸಿಗೇ ಮೂರು ಇಲ್ಲವೇ ನಾಲ್ಕನೇ ಹಂತದ ಪದೋನ್ನತಿ ಪಡೆಯುತ್ತಾರೆ. ಇದು ತಾರತಮ್ಯಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಮೇಲ್ಮನವಿಯಲ್ಲಿ ಆಕ್ಷೇಪಿಸಲಾಗಿತ್ತು. 
ಇದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ 2017ರ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರ 2002ರಲ್ಲಿ ರೂಪಿಸಿದ್ದ ಜೇಷ್ಠತೆ ನಿರ್ಣಯ ಕಾಯ್ದೆಯನ್ನು ರದ್ದುಗೊಳಿಸಿತ್ತು. ಜೊತೆಗೆ, ಮೂರು ತಿಂಗಳಲ್ಲಿ ಹೊಸ ಕಾಯ್ದೆ ರೂಪಿಸುವಂತೆ ಸೂಚಿಸಿತ್ತು. ಹೊಸ ನಿಯಮ ಜಾರಿಗೊಳಿಸುವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಇದರನ್ವಯ ರಾಜ್ಯ ಸರ್ಕಾರ ಕೂಡ ಮುಚ್ಚಳಿಕೆ ಬರೆದುಕೊಟ್ಟಿತ್ತು. 
ಆ ನಂತರ ಸಿದ್ದರಾಮಯ್ಯ ಅವಧಿಯಲ್ಲಿ ಬಡ್ತಿ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತಂದು ರಾಷ್ಟ್ರಪತಿಗಳ ಅಂಕಿತ ಪಡೆಯಲಾಗಿತ್ತು. ಆದರೆ ಜಾರಿ ಮಾಡಿರಲಿಲ್ಲ. ಹಾಲಿ ಸರ್ಕಾರ ತಿದ್ದುಪಡಿ ಕಾಯ್ದೆಗೆ ಸಂಪುಟ ಸಭೆಯ ಅನುಮೋದನೆ ಪಡೆದು ಫೆ.27ರಂದು ಜಾರಿಗೊಳಿಸಿತ್ತು. ಇದಕ್ಕೆ ಸುಪ್ರೀಂ ಕೋರ್ಟ್ ಅಡ್ಡಿಯಾಗುವುದಿಲ್ಲ ಎಂದು ಅಟಾರ್ನಿ ಜನರಲ್ ಮುಕುಲ್ ರೊಹಟಗಿ ಅವರೇ ಸ್ಪಷ್ಟೀಕರಣ ನೀಡಿದ್ದಾರೆ ಎಂದು ಸರ್ಕಾರ ಸಮರ್ಥಿಸಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com